ಕೋಲ್ಕತ್ತಾ : ದೇಶದ್ಯಾಂತ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳ ಗಡಿ ದಾಟುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಸೆಮಿನಾರ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ‘ದೇಶದಾದ್ಯಂತ ಪ್ರತಿಕೂಲ ವಾತಾವರಣ’ ಇರುವುದರಿಂದ ಮತ್ತು ಹೆಚ್ಚಿನವರು ಪಕ್ಷವನ್ನು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಪರಿಗಣಿಸಿದ್ದಾರೆ.
ಹೀಗಾಗಿ ಈ ಬಾರಿ ಬಿಜೆಪಿ 200 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಎನ್ಡಿಎಯನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾದರೆ, ಪಕ್ಷ ಸಂಸತ್ತಿನಲ್ಲಿ ಇಂಡಿಯ ಒಕ್ಕೂಟವನ್ನು ಮುನ್ನಡೆಸಬೇಕೆ ಹೊರತು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅಲ್ಲ ಎಂದು ಭೂಷಣ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ‘ಮಾಂಸ, ಮಂಗಳಸೂತ್ರ ಮತ್ತು ಎಮ್ಮೆಗಳು’ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಚುನಾವಣೆ ತನ್ನ ಹಿಡಿತದಿಂದ ಜಾರುತ್ತಿದೆ ಎಂದು ಪ್ರಧಾನಿ ಅರಿತುಕೊಂಡಿದ್ದಾರೆ. ಅದಕ್ಕಾಗಿಯೇ ಅವರು ಹತಾಶೆಯಿಂದ ಬೆಂಕಿ ಹಚ್ಚುವಂತ ಭಾಷಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
‘ಹಲವು ಕಾರಣಗಳಿಗಾಗಿ ಬಿಜೆಪಿ ವಿರುದ್ಧ ಪ್ರತಿಕೂಲ ವಾತಾವರಣ ಇದೆ ಎಂದು ನಾನು ಭಾವಿಸುತ್ತೇನೆ. ಅವರು (ಬಿಜೆಪಿ) ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟುಮಾಡುತ್ತಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು, ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳಿಸಲು ಮತ್ತು ಚುನಾವಣೆ ವೆಚ್ಚಕ್ಕೆ ಹಣ ಸಿಗದಂತೆ ನಿರ್ಬಂಧ ಹೇರುತ್ತಿದ್ದಾರೆ. ಹೀಗಾಗಿ ಜನರಿಗೆ ಬಿಜೆಪಿ ವಿರುದ್ಧ ಸಾಕಷ್ಟು ಕೋಪವಿದೆ,’ ಎಂದು ವಿವರಿಸಿದ್ದಾರೆ.
ಕೋಮುಪ್ರಚಾರ ಕೂಡ ಬಿಜೆಪಿಯ ಜನಪ್ರಿಯತೆ ಕುಸಿತದ ಹಿಂದಿನ ಹಲವು ಕಾರಣಗಳಲ್ಲಿ ಒಂದು. ಜನರು ಇಂಥ ವಿಷಯಗಳನ್ನು ಇಷ್ಟಪಡುವುದಿಲ್ಲ. ಕೋಮುವಾದದ ಮೇಲೆ ದೇಶವನ್ನು ವಿಭಜಿಸುವ ಪ್ರಯತ್ನವಾಗಿ ನೋಡುತ್ತಾರೆ. ಇದರಿಂದ ದೇಶ ದುರ್ಬಲಗೊಳ್ಳುತ್ತದೆ. ಆದ್ದರಿಂದ, ಬಿಜೆಪಿಯ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ನಾನು ಬಾವಿಸುತ್ತೇನೆ’ ಎಂದು ಅವರು ಹೇಳಿದರು.






































