ಎಳವೆಯಲ್ಲಿಯೇ ಓದಿನ ಹವ್ಯಾಸ ಬೆಳೆಸ ಬೇಕು~ ನೀಸು ಅಡಿಗ
ಉಡುಪಿ: ಮಕ್ಕಳಿಗೆ ಎಳವೆಯಲ್ಲಿಯೇ ಓದಿನ ಹವ್ಯಾಸ ಬೆಳೆಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೆತ್ತವರಿಗೆ ಕಿವಿಮಾತು ಹೇಳಿದರು.
ಉಡುಪಿ ಡಿವೈಎಸ್ಪಿ ಡಿ. ಟಿ. ಪ್ರಭು ಪುತ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿನಿ ಪ್ರಿಯದರ್ಶಿನಿ ಪಿ. ವಿರಚಿತ `ಕೀಕಾ’ ಪುಸ್ತಕವನ್ನು ಶುಕ್ರವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಓದುವವರ ಸಂಖ್ಯೆ ವಿರಳವಾಗಿದೆ. ಆದ್ದರಿಂದ ಓದಿನ ಹವ್ಯಾಸ ಹೆಚ್ಚಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದವರು ಸಲಹೆ ನೀಡಿದರು.
ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದರೂ ಪ್ರಿಯದರ್ಶಿನಿ ಅವರು ಈ ಪುಸ್ತಕದಲ್ಲಿ ಪರಿಸರ, ಸ್ವಾತಂತ್ರ್ಯ ಹೋರಾಟ, ಹೆಚ್ಚಾಗಿ ರಾಣಾ ಪ್ರತಾಪಸಿಂಹ ಬಗೆಗೆ ಅನೇಕರಿಗೆ ಗೊತ್ತಿಲ್ಲದ ವಿಚಾರಗಳನ್ನು ದಾಖಲಿಸಿದ್ದಾರೆ. ಇದು ಶಿಕ್ಷಕ ಕೈಪಿಡಿಯಾಗಲು ಯೋಗ್ಯವಾಗಿದೆ ಎಂದರು.
ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹಾಸ್ಯ ಸಾಹಿತಿ ಶಾಂತರಾಜ ಐತಾಳ್, ಮೊಬೈಲ್ ಯುಗದಲ್ಲಿ ಜನರಿಗೆ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಎಂಜಿಎಂ ಕಾಲೇಜು ಪ್ರಾಚಾರ್ಯ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಅಜ್ಜರಕಾಡು ಜಿ. ಶಂಕರ್ ಮಹಿಳಾ ಸರ್ಕಾರಿ ಕಾಲೇಜು ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ರಾಜೇಂದ್ರ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕ ಮಹೇಶ ಶೆಟ್ಟಿ, ಉದ್ಯಮಿ ಪುರುಷೋತ್ತಮ ಶೆಟ್ಟಿ ಅಭ್ಯಾಗತರಾಗಿದ್ದರು.
ಲೇಖಕಿ ಪ್ರಿಯದರ್ಶಿನಿ ಮತ್ತು ಶರಣಮ್ಮ ಇದ್ದರು.
ಪೊಲೀಸ್ ಕಾನ್ಸ್ ಟೇಬಲ್ ಯೋಗೀಶ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ನವ್ಯಾ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರಿಯದರ್ಶಿನಿ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.






































