ಹೊ(ಕೊ)ಳೆಯಾದ ರಾಷ್ಟ್ರೀಯ ಹೆದ್ದಾರಿ

ಕಲ್ಲಡ್ಕ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಈಗಾಗಲೇ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ನಡುವೆ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಅವಾಂತರ ಸೃಷ್ಠಿಸಿದೆ. ರಾಷ್ಟ್ರೀಯ ಹೆದ್ದಾರಿ ಹೊಳೆಯಂತಾಗಿರುವುದರಿಂದ ಲಘು ವಾಹನ ಸಂಚಾರಕ್ಕೆ ತ್ರಾಸದಾಯಕವಾಗಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಂದಗತಿಯ ಕಾಮಗಾರಿ ಇದಕ್ಕೆಲ್ಲ ಕಾರಣವೂ ಆಗಿದೆ.


ಮಳೆಗಾಲದಲ್ಲಿ ಇಲ್ಲಿ ಅಗುವಂತಹ ಅನಾಹುತದ ಕುರಿತು ಸ್ಥಳೀಯರಿಂದ ಬಂದ ದೂರಿನ ಮೇಲೆಗೆ ಜಿಲ್ಲಾಧಿಕಾರಿ ಅವರು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಲ್ಲಡ್ಕ ಪ್ರದೇಶಕ್ಕೆ ಅಗಮಿಸಿದ್ದರು. ಅದೇ ಸಂದರ್ಭದಲ್ಲಿ ವಿವಿಧ ಇಲಾಖಾಧಿಕಾರಿಗಳು ಸ್ಥಳದಲ್ಲಿ ಇದ್ದರು. ಸಂಬಂಧ ಪಟ್ಟ ಇಲಾಖಾಧಿಕಾರಿಗೆ ಸೂಚನೆ ನೀಡಿ ಮಳೆಗಾಲದಲ್ಲಿ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸುವಂತೆ ಹೇಳಿದರು.
ಇದಾದ ಬೆನ್ನಲ್ಲೆ ಮಳೆಅವಾಂತರ ಎದುರುಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಣಿದ್ದು ಕುರುಡತನ ಹಾಗೂ ಕಿವಿದ್ದು ಕಿವುಡ ತನದಂತೆ
ವರ್ತಿಸುವುದಕ್ಕೆ ಕಲ್ಲಡ್ಕ ನಾಗರಿಕರಿಂದ ಭಾರೀ ಆಕ್ರೋಶ ವ್ಯಕ್ತಗೊಂಡಿದೆ.
ಕಲ್ಲಡ್ಕ ಪರಿಸರದಲ್ಲಿ ಯಾವುದೇ ಅನಾಹುತ ಸಂಭವಿಸಿದ್ದಲ್ಲಿ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ವಹಿಸಿಕೊಂಡ ಕಂಟ್ರಾಕ್ಟರ್ ದಾರರನ್ನೇ ಹೊಣೆಯಾಗಿರಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.






































