ಅತಂತ್ರ ಸ್ಥಿತಿ ಹರಿಯಾಣ ಬಿಜೆಪಿ ಸರಕಾರ: “ಕೈ” ಕೊಟ್ಟ ಮೂವರು ಪಕ್ಷೇತರ ಶಾಸಕರು
ಚಂಡೀಗಢ: ಹರಿಯಾಣದಲ್ಲಿ ರಾಜಕೀಯ ಹೊಸ ಬೆಳವಣಿಗೆ ತಲೆದೋರಿದ್ದು,ಮೂವರು ಪಕ್ಷೇತರರು ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.
ಮೂವರು ಪಕ್ಷೇತರ ಶಾಸಕರಾದ ಸೋಂಬಿರ್ ಸಾಂಗ್ವಾನ್, ರಣಧೀರ್ ಗೊಲ್ಲೆನ್ ಮತ್ತು ಧರಂಪಾಲ್ ಗೊಂಡರ್ ಕಾಂಗ್ರೆಸ್ಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರ ಉಪಸ್ಥಿತಿಯಲ್ಲಿ ರೋಕ್ಟಕ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದರು.
ಪ್ರಸ್ತುತ 88 ಸದಸ್ಯರ ಬಲ ಹೊಂದಿದೆ. ಇದರಲ್ಲಿ ಬಿಜೆಪಿಯ 40 ಸದಸ್ಯರಿದ್ದಾರೆ. ಬಿಜೆಪಿಗೆ ಈ ಹಿಂದೆ ಜೆಜೆಪಿ ಶಾಸಕರು, ಪಕ್ಷೇತರರ ಬೆಂಬಲವಿತ್ತು. ಆದರೆ, ಜೆಜೆಪಿ ಕೂಡಾ ಬೆಂಬಲ ಹಿಂಪಡೆದಿದ್ದು, ಇದೀಗ ಪಕ್ಷೇತರರು ಕೂಡಾ ಬೆಂಬಲ ವಾಪಸ್ ಪಡೆದಿದ್ದಾರೆ.”ನಯಾಬ್ ಸಿಂಗ್ ಸೈನಿ ಸರ್ಕಾರ ಬಹುಮತವಿಲ್ಲದ ಸರ್ಕಾರವಾಗಿದೆ. ಒಂದು ನಿಮಿಷವೂ ಅಧಿಕಾರದಲ್ಲಿ ಉಳಿಯಲು ಹಕ್ಕಿಲ್ಲದ ಕಾರಣ ಮುಖ್ಯಮಮಂತ್ರಿ ರಾಜೀನಾಮೆ ನೀಡಬೇಕು. ತಕ್ಷಣವೇ ವಿಧಾನಸಭಾ ಚುನಾವಣೆ ನಡೆಸಬೇಕು ಎಂದು ಉದಯ್ ಭಾನು ಆಗ್ರಹಿಸಿದರು.






































