ಉತ್ತಮ ಸಮಾಜ ನಿರ್ಮಾಣಕ್ಕೆ ಕಲಾಶಿಕ್ಷಣ ಪೂರಕ: ಚಂಬಲ್ತಿಮಾರ್
ಪುತ್ತೂರು : ವಿದ್ಯಾಲಯಗಳಲ್ಲಿ ಪಠ್ಯದ ಜತೆ ಕಲಾಶಿಕ್ಷಣ ನೀಡುವುದು ಸದಭಿರುಚಿಯ ಸ್ವಸ್ಥ ಸಮಾಜ ನಿರ್ಮಾಣ ದೃಷ್ಟಿಯಲ್ಲಿ ಅನಿವಾರ್ಯ. ಭಾರತ ವಿಶ್ವವಂದ್ಯವಾಗಬೇಕಿದ್ದರೆ ನಮ್ಮ ವಿದ್ಯಾಲಯಗಳಿಂದ ಸಾಧಕರ ಸೃಷ್ಟಿಯಾಗಬೇಕು. ಶಿಕ್ಷಣ ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗದೇ ಮಾನವೀಯ ಸದ್ಗುಣಗಳ, ಸದಭಿರುಚಿಯ ಪ್ರತಿಭಾಶೀಲರ ಸಮಾಜ ರೂಪಿಸುವ ಬುನಾದಿಯಾಗಬೇಕು. ಪಠ್ಯದ ಜತೆ ಕಲಾ ಶಿಕ್ಷಣ ಇದಕ್ಕೆ ಪೂರಕ ಎಂದು ‘ಕಣಿಪುರ’ ಯಕ್ಷಗಾನ ಮಾಸಪತ್ರಿಕೆ ಪ್ರಧಾನ ಸಂಪಾದಕ, ಲೇಖಕ ಎಂ. ನಾ.ಚಂಬಲ್ತಿಮಾರ್ ನುಡಿದರು.
ಪುತ್ತೂರಿನ ನಟ್ಟೋಜ ಫೌಂಡೇಷನ್ ಟ್ರಸ್ಟ್ ಸಾರಥ್ಯದ ಅಂಬಿಕಾ ವಿದ್ಯಾಲಯ(ಸಿಬಿಎಸ್ಇ) ಸಂಸ್ಥೆಯ 2024-25ನೇ ಶೈಕ್ಷಣಿಕ ವರ್ಷದ ಕಲಾ ಸಾಂಸ್ಕೃತಿಕ ಚಟುವಟಿಕೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಪ್ರಾಂಶುಪಾಲೆ ಕು. ಮಾಲತಿ ಡಿ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕುವೀರಾ ನಿರೂಪಣೆಗೈದಳು. ಯಶಸ್ ಪ್ರಾರ್ಥನೆ ಹಾಡಿದರೆ ಅನಘಶ್ರೀ ಸ್ವಾಗತಿಸಿ ಸೋನಾಪ್ರೃಥ್ವೀ ವಂದಿಸಿದಳು.
ಪ್ರಸ್ತುತ ಸಂಸ್ಥೆಯಲ್ಲಿ ಸನಾತನ ಭಾರತೀಯ ಪರಂಪರೆಯ ಕಲೆಗಳಾದ ಶಾಸ್ತ್ರೀಯ ಸಂಗೀತ, ಶಾಸ್ತ್ತೀಯ ನೃತ್ಯ ಮತ್ತು ಯಕ್ಷಗಾನಕ್ಕೆ ವಿಶೇಷ ಪ್ರಾಶಸ್ಯದೊಂದಿಗೆ ಶಿಕ್ಷಣ ನೀಡಲಾಗುತ್ತಿದೆ



































