ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿದ್ದ ಬಿಜೆಪಿಗರ ಬಾಯಲ್ಲಿ ಸಂವಿಧಾನದ ರಕ್ಷಣೆಯ ಮಾತು ಬರುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆಯ ಪಠಣ..!
ಕಾರ್ಕಳ : ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಜಾರಿಯಾಗಿದ್ದು ಕಾಂಗ್ರೆಸ್ ಗ್ಯಾರಂಟಿಯ ಜನಪ್ರೀಯತೆಯು ಬಿಜೆಪಿಯ ನಿದ್ದೆಗೆಡಿಸಿದೆ. ಬಿಜೆಪಿಯು ಆರಂಭದಿಂದಲೂ ಬಡವರಿಗೆ ನೀಡುವ ಕಾಂಗ್ರೆಸ್ ಗ್ಯಾರಂಟಿ ವಿರುದ್ದ ಟೀಕೆ ಮಾಡುತ್ತಾ ವಿರೋದಿಸುತ್ತಿದೆ, ಹಾಗು ಬಡವರ ಬಗ್ಗೆ ಕೇವಲವಾಗಿ ಮಾತ್ನಾಡುತ್ತಾ ಬಂದಿರುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಮುಂದೆಯೂ ರಾಜ್ಯದ ಜನರಿಗೆ ಸಿಗಬೇಕಾದರೆ ಬಿಜೆಪಿಯನ್ನು ಲೋಕಸಭೆಯಲ್ಲಿ ಸೋಲಿಸುವುದು ಅನಿವಾರ್ಯವಾಗಿದೆ ಎಂದು ನಮ್ಮ ಪಕ್ಷದ ನಾಯಕರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕಾರ್ಕಳ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಬೇಲಾಡಿ ತಿಳಿಸಿದ್ದಾರೆ.
ಕಾಂಗ್ರೆಸ್ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಶ್ರಮಿಸುತ್ತಿದ್ದು ಬಿಜೆಪಿಯಿಂದ ಸಂವಿಧಾನಕ್ಕೆ ನಿಜವಾಗಿಯೂ ಅಪಾಯವಿದೆ. ನಾವು ಅಧಿಕಾರಕ್ಕೆ ಬಂದಿರುವುದೇ ದೇಶದ ಸಂವಿಧಾನವನ್ನು ಬದಲಾವಣೆ ಮಾಡಲು ಎಂದು ಬಿಜೆಪಿಯ ಸಂಸದರಾದ ಅನಂತಕುಮಾರ್ ಹೆಗಡೆಯವರು ಹೇಳಿದಾಗ ಕಾರ್ಕಳ ಬಿಜೆಪಿ ಬಾಯಿಮುಚ್ವಿ ಕುಳಿತು ತನ್ನ ಮೌನ ಸಮ್ಮತಿಯನ್ನು ಸೂಚಿಸಿತ್ತು.
ಬಿಜೆಪಿಯ ಇಂತಹ ಸಂವಿಧಾನ ವಿರೋಧಿ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸಿತ್ತು ಹಾಗೂ ಸಂವಿಧಾನಕ್ಕೆ ಬಿಜೆಪಿಯಿಂದಾಗುವ ಅಪಾಯಗಳ ಬಗ್ಗೆ ನಿರಂತರವಾಗಿ ಜನ ಜಾಗೃತಿ ಮೂಡಿಸಿತ್ತು. ಇದರ ಪರಿಣಾಮದಿಂದ ಇಂದು ಕಾರ್ಕಳ ಬಿಜೆಪಿಗೆ ಸಂವಿಧಾನದ ಮೇಲೆ ಕಾಳಜಿ ಬಂದಿದ್ದು ಬಿಜೆಪಿಯ ನಗರ ಅಧ್ಯಕ್ಷ ರವೀಂದ್ರ ಮೊಯ್ಲಿಯವರು ಸಂವಿಧಾನದ ಬಗ್ಗೆ ಅಪಾರ ಗೌರವ ವ್ಯಕ್ತಪಡುಸುವುದರೊಂದಿಗೆ ಸಂವಿಧಾನದ ಬಗ್ಗೆ ಕಾಳಜಿಯನ್ನು ಮೂಡಿಸುವಲ್ಲಿ ಯಶಸ್ವಿಯಾದ ನಮ್ಮ ನಾಯಕರಾದ ಉದಯಕುಮಾರ್ ಶೆಟ್ಟಿಯವರನ್ನು ನಾನು ಅಭಿನಂದಿಸುತ್ತೇನೆ.
ಕ್ಷೇತ್ರದ ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತ, ಬಡ ಜನರ ಸೇವಯನ್ನು ನಿರಂತರವಾಗಿ ಮಾಡುತ್ತಾ, ದೈವ ದೇವಸ್ಥಾನಗಳ ಜೀರ್ಣೋದ್ದಾರದ ಕಾರ್ಯಗಳಿಗೆ ಸಹಕಾರವನ್ನು ನೀಡುತ್ತಿರುವ ದೈವಭಕ್ತ, ಧರ್ಮನಿಷ್ಠ ಉದಯಕುಮಾರ್ ಶೆಟ್ಟಿಯವರ ಜನಪ್ರಿಯತೆಯನ್ನು ಸಹಸಲಾಗದೆ ಅವರ ವಿರುದ್ದ ಸುಳ್ಳು ಆರೋಪವನ್ನು ಮಾಡಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದ್ದು ಕೈಲಾಗದವ ಮೈಪರಚಿಕೊಂಡ ಎನ್ನುವಂತಾಗಿದೆ ಎಂದು ಕಾರ್ಕಳ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಬೇಲಾಡಿ ತಿಳಿಸಿದ್ದಾರೆ.



































