ಹೆಬ್ರಿ ಹರೀಶ ಪೂಜಾರಿ ಆಸ್ಟ್ರೇಲಿಯಾ ಅವರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ
ಮುದ್ರಾಡಿ : ಮುದ್ರಾಡಿ ನಮತುಳುವರ್ ಕಲಾ ಸಂಘಟನೆಯ ವತಿಯಿಂದ ಸುವರ್ಣ ಕರ್ನಾಟಕ ರಂಗ ಅಭಿಯಾನ ಪ್ರಯುಕ್ತ ನೀಡುವ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಸಿಎ ಆಗಿರುವ ಹೆಬ್ರಿ ಹರೀಶ ಪೂಜಾರಿ ಆಯ್ಕೆಯಾಗಿದ್ದು ಎಪ್ರಿಲ್ ೧೧ರಂದು ಮುದ್ರಾಡಿ ನಾಟ್ಕದೂರಿನಲ್ಲಿ ಪ್ರಶಸ್ತಿ ಪ್ರಧಾನ ಮತ್ತು " ಅಂಬೆ " ನಾಟಕ ೨೫ನೇ ಪ್ರದರ್ಶನ ನಡೆಯಲಿದೆ. ದೂರದ ಆಸ್ಟ್ರೇಲಿಯಾದಲ್ಲಿದ್ದರೂ ಕನ್ನಡದ ಸೇವೆ, ತಾಯ್ನಾಡಿನ ಸೇವೆಯನ್ನು ಹರೀಶ ಪೂಜಾರಿ ನಿರಂತರವಾಗಿ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ಕನ್ನಡ ಸಂಘದ ಸಕ್ರೀಯ ಸದಸ್ಯರಾಗಿ ಕನ್ನಡ ಸಂಘದ ಪ್ರಾಯೋಜಕರಾಗಿ ಸೇವೆ ಮಾಡುತ್ತಿದ್ದಾರೆ. ಮೆಲ್ಬೋರ್ನ್ ಕನ್ನಡ ಭವನ ಟ್ರಸ್ಟ್ ಸಂಸ್ಥಾಪಕ ಸದಸ್ಯರಾಗಿ ಕನ್ನಡ ಭವನಕ್ಕೆ ವಿಶೇಷ ಕೊಡುಗೆಯನ್ನು ನಿರಂತರವಾಗಿ ನೀಡುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದು ಆಸ್ಟ್ರೇಲಿಯಾದ ಸಿಎ ಪದವಿ ಮತ್ತು ಆಸ್ಟ್ರೇಲಿಯಾ ಹಣಕಾಸು ಸಚಿವಾಲಯದಲ್ಲಿ ವಿಶೇಷ ಪದವಿ ಪಡೆದಿದ್ದಾರೆ. ಕಲೇದ ೨೦ ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ಹಣಕಾಸು ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರು ಮತ್ತು ವಿವಿಧ ಹುದ್ದೆಯಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ. ಹಣಕಾಸು, ಕೈಗಾರಿಕೆ ಹಾಗೂ ಉದ್ಯಮ ಸಮೂಹ ಸಂಸ್ಥೆಗಳ ಹಣಕಾಸು ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾದ ಚಾರ್ಟೇಡ್ ಅಕೌಂಟೆಂಟ್ ಸಂಸ್ಥೆಗಳ ಸದಸ್ಯರಾಗಿ, ಆಸ್ಟ್ರೇಲಿಯಾ ತೆರಿಗೆ ಎಜೆಂಟ್ ಬೋರ್ಡ್ ಸದಸ್ಯರಾಗಿದ್ದಾರೆ. ಆಸ್ಟ್ರೇಲಿಯಾ ಮತ್ತು ಭಾರತದ ಹಣಕಾಸು ಸಂಸ್ಥೆಗಳ ಸದಸ್ಯರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



































