ಶ್ರೀ ಚಾರುಕೀರ್ತಿ ಯಕ್ಷಕಲಾ ಬಳಗದ 2024ರ ಸರಣಿ ತಾಳ ಮದ್ದಳೆ
RB NEWS
Bureau Report
ಮೂಡುಬಿದಿರೆ : ಮೂಡುಬಿದಿರೆ ಜೈನ ಮಠ ಟ್ರಸ್ಟ್ ಮತ್ತು ಧವಳತ್ರಯ ಟ್ರಸ್ಟ್ ವತಿಯಿಂದ ಆದ್ಯ ಶ್ರೀ ಚಾರುಕೀರ್ತಿ ಯಕ್ಷಕಲಾ ಬಳಗದ 2024ರ ಸರಣಿ ತಾಳ ಮದ್ದಳೆಯನ್ನು ಜೈನ ಮಠದ ಸಭಾಂಗಣದಲ್ಲಿ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಭಟ್ಟಾರಕ ಪಂಡಿತಾಚಾರ್ಯವರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ದೀಪ ಹಚ್ಚಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಯಕ್ಷಗಾನ ಸರಣಿ ಕಾರ್ಯಕ್ರಮದ ಮಹಾಪೋಷಕರಲ್ಲೊಬ್ಬರಾಗಿರುವ ಉದ್ಯಮಿ ಶೈಲೇಂದ್ರ ಆರ್.ಮೂಡುಬಿದಿರೆ ಅವರು ದೀಪ ಬೆಳಗಿಸಿದರು.ಯಕ್ಷಗಾನ ಕಲೆಯ ಅತೀ ದೊಡ್ಡ ಅಭಿಮಾನಿ ಹಾಗೂ ಪ್ರೋತ್ಸಾಹಕರಾಗಿರುವ ಭುಜಬಲಿ ಧರ್ಮಸ್ಥಳ ಅವರು ಕೂಡಾ ಉಪಸ್ಥಿತರಿದ್ದು ಜ್ಯೋತಿ ಬೆಳಗಿಸಿದರು. ಕಲಾ ಕಾರ್ಯಕ್ರಮದ ಪೋಷಕರಲ್ಲೊಬ್ಬರಾಗಿರುವ ಎಂ. ಬಾಹುಬಲಿ ಪ್ರಸಾದ್,ಹಿರಿಯ ಯಕ್ಷಗಾನ ವಿಮರ್ಶಕ ಶಾಂತಾರಾಮ ಕುಡಿವ ಮೂಡುಬಿದಿರೆ ಮುಂತಾದವರು ಉಪಸ್ಥಿತರಿದ್ದರು.
ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ “ಭೀಷ್ಮಾರ್ಜುನ” ಕಥಾ ಪ್ರಸಂಗದಲ್ಲಿ ಭೀಷ್ಮನಿಗ ಸುಣ್ಣಂಬಳ ವಿಶ್ವೇಶ್ವರ ಭಟ್,ಅರ್ಜುನನಾಗಿ ಮೂಡುಬಿದಿರೆ ಜೈನ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರಭಾಕ್ ಬಲ್ನಾಡ್ ,ಕೃಷ್ಣನಾಗಿ ಹಿರಣ್ಯ ವೆಂಕಟೇಶ್ ಭಟ್ ಪಾತ್ರ ನಿರ್ವಹಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ,ಚಂಡೆ ವಾದಕ ರವಿರಾಜ ಜೈನ್,ಮದ್ದಲೆ ವಾದಕನಾಗಿ ಕೌಶಲ ರಾವ್ ಪುತ್ತಿಗೆ ಭಾಗವಹಿಸಿದ್ದರು. ಕಳೆದ ಹತ್ತಾರು ವರ್ಷಗಳಿಂದ ಮೂಡುಬಿದಿರೆ ಜೈನ ಮಠದಲ್ಲಿ ಸರಣಿ ತಾಳಮದ್ದಳೆ, ಯಕ್ಷಗಾನ ಕಾರ್ಯಕ್ರಮ,ನೃತ್ಯ ಸಂಗೀತದಂತಹ ಸಾಂಸ್ಕೃತಿಕ ವೈಭವಗಳ ಪ್ರದರ್ಶನವನ್ನು ಮಠದ ಸ್ವಾಮೀಜಿಯವರು ಏರ್ಪಡಿಸುತ್ತ ಬರುತ್ತಿದ್ದಾರೆ. ಕಲೆ ಸಂಸ್ಕೃತಿಯ ಬಗ್ಯೆ ಅಪಾರ ಪ್ರೀತಿ ಅಭಿಮಾನವುಳ್ಳ ಅವರು ತನ್ನದೇ ಶಕ್ತ್ಯಾನುಸಾರವಾಗಿ ಕಾರ್ಯಕ್ರಮ ನಡೆಸುತ್ತ ಬರುತ್ತಿರುವುದು ಶ್ಲಾಘನೀಯವಾಗಿದೆ.
ಸಭಾ ಕಾರ್ಯಕ್ರಮದ ಆರಂಭದಲ್ಲಿ ಶೈಲೇಂದ್ರ ಆರ್ ಅವರು ಸ್ವಾಮೀಜಿಯವರಿಗೆ ಫಲ ಪುಷ್ಪ ಗಂಧವನ್ನಿತ್ತು ಗೌರವಿಸಿ ಪ್ರಣಾಮ ಸಲ್ಲಿಸಿದರು.ನಂತರ ಭುಜಬಲಿ ಧರ್ಮಸ್ಥಳ ಮತ್ತು ಶೈಲೇಂದ್ರ ಆರ್. ಅವರಿಗೆ ಸ್ವಾಮೀಜಿಯವರು ಶಾಲು ಹೊದಿಸಿ ಗೌರವಿಸಿದರು.ಪ್ರದೀಪ್ ಬಲ್ನಾಡ್ ಕಾರ್ಯಕ್ರಮ ನಿರೂಪಿಸಿದರು.