ಮೂಡುಬಿದಿರೆ : ವ್ಯಾಸ ಕನ್ನಡ ಓಟಿಟಿ ನಾಮಾಂಕಿತದ ನೂತನ ಡಿಜಿಟಲ್ ಮಾಧ್ಯಮವು ಮೂಡುಬಿದಿರೆಯ ಸಮಾಜಮಂದಿರದಲ್ಲಿ ಲೋಕಾರ್ಪಣೆಗೊಂಡಿತು.
ವ್ಯಾಸ ಕನ್ನಡ ಓಟಿಟಿಯ ಮೂಲಕ ಮಕ್ಕಳಿಗೆ ಮಹಾಭಾರತ ಹಾಗೂ ರಾಮಾಯಣದ ಕತೆಗಳನ್ನು ಅನಿಮೇಶನ್ ಮುಖಾಂತರ ಮಕ್ಕಳಿಗೆ ತಲುಪಿಸುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ವ್ಯಾಸ ಕನ್ನಡದ ನಿರ್ವಾಹಕ ನಿರ್ದೇಶಕಿ ಬಿ. ಮೇಘನಾ ಶೆಣೈ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರುಷಾರ್ಥ್ ಇನ್ವೆಸ್ಟ್ಮೆಂಟ್ಸ್ ಎಂಡ್ ಕನ್ಸ್ಲ್ಟೇಟರಿಯ ನಿರ್ವಾಹಕ ನಿರ್ದೇಶಕ ಅಜೇಯ್ ಶೆಟ್ಟಿ ಅವರು, ಸನಾತನ ಧರ್ಮದ ಬುನಾದಿಯಾದ ಮಹಾಭಾರತ ಹಾಗೂ ರಾಮಾಯಣದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯ ಇದೆ. ಆ ಸತ್ಕಾರ್ಯ ಕಾರ್ಯರೂಪಕ್ಕೆ ತರಬೇಕೆಂಬ ಸದ್ದುದ್ದೇಶ ಕಾರ್ಯ ವ್ಯಾಸ ಕನ್ನಡ ಓಟಿಟಿ ಮೂಲಕ ಆಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ನಳಿನಿ ಕಾಮತ್ ಯು.ಜಿ ಅವರು, “ಅನೀಮೇಷನ್ ಅಂದರೆ ನಮಗೆ ನೆನಪಾಗುವುದು, ಒಂದಷ್ಟು ಕಾಲ್ಪನಿಕ ಪಾತ್ರಗಳು, ಆದರೆ ಇಲ್ಲಿ ವ್ಯಾಸ ಕನ್ನಡ ಓಟಿಟಿ ಆನೀಮೇಷನ್ ಮೂಲಕ ಪೌರಾಣಿಕ ಕತೆಗಳು ಮೂಡಿ ಬರುತ್ತಿವೆ. ಇಂದಿನ ತಲೆಮಾರುಗಳಿಗೆ ತಲುಪುವಂತೆ ತಾಂತ್ರಿಕತೆಯ ಮೂಲಕ ಹಳೆಯದನ್ನು ಹೊಸದರೊಂದಿಗೆ ಸಮನ್ವಯಗೊಳಿಸಿ, ಪೌರಾಣಿಕ ಕತೆಗಳನ್ನು ಜನಮನಗಳಲ್ಲಿ ನೆಲೆಗೊಳಿಸುವಂತಗಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿದ್ದ ತ್ರಿಷಾ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಸಿಎ ಗೋಪಾಲಕೃಷ್ಣ ಭಟ್ ಅವರು ಮುಂದಿನ ಪೀಳಿಗೆಗೆ ಪುರಾತನ ಕಥೆಗಳನ್ನು ನೈಜತೆಯಿಂದ ತಿಳಿಸಲು ಹೊರಟಿರುವ ವ್ಯಾಸ ಕನ್ನಡಕ್ಕೆ ಹೆಚ್ಚಿನ ಯಶಸ್ಸು ಸಿಗಲಿ. ನಮ್ಮೆಲ್ಲರ ಸಹಕಾರ ಯಾವಾಗಲೂ ಇರುತ್ತದೆ. ಹಲವಾರು ಕೈಗಳು ಸೇರಿದಾಗ ಒಂದು ಕಾರ್ಯಕ್ರಮ ಒಳ್ಳೆ ಫಲಿತಾಂಶ ಕೊಡುತ್ತದೆ. ವ್ಯಾಸ ಕನ್ನಡ ಪ್ರತಿಯೊಬ್ಬರ ಮನೆ ಮಾತಾಗುವಷ್ಟು ಬೆಳೆಯ ಬೇಕು ಎಂದು ಹಾರೈಸಿದರು.
ವ್ಯಾಸ ಕನ್ನಡ ಓಟಿಟಿಯಲ್ಲಿ ಮೂಡಿ ಬರಲಿರುವ ಕಥಾ ಸರಣಿಯ ಬರಹಗಾರ ಚಲನಚಿತ್ರ ನಿರ್ದೇಶಕ ಸುಧೀರ್ ಶಾನುಭೋಗ್, ಓದುವ ಸಂಸ್ಕೃತಿ ಕಡಿಮೆಯಾಗಿರುವ ಈ ಕಾಲಘಟ್ಟದಲ್ಲಿ ನಮ್ಮ ಸಂಸ್ಖೃತಿ ಸಂಬಂಧಪಟ್ಟ ವಿಚಾರಗಳು ಜನರಿಗೆ ತಲುಪಲು ಡಿಜಿಟಲ್ ಮಾಧ್ಯಮವೇ ಸೂಕ್ತ ಎಂದು ಅಭಿಪ್ರಾಯಪಟ್ಟರು.
ವ್ಯಾಸ ಕನ್ನಡ ಓಟಿಟಿಯಲ್ಲಿ ಮಾರ್ಚ್ ತಿಂಗಳ ಹತ್ತನೇ ತಾರಿಕು ಭಾನುವಾರ ಸರಣಿಯ ಮೊದಲ ಕಂತು “ಸರ್ಪಮೇಧ” ಪ್ರಸಾರವಾಗಲಿದೆ.
ನಂತರ ಪ್ರತಿ ಭಾನುವಾರ ಹೊಸಕಂತುಗಳು ವ್ಯಾಸ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ ಎಂದರು.
ಸೌಮ್ಯ ನಾಯಕ್ ನಿರೂಪಿಸಿದರು.


























