ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ತನ್ನ ಮಾವನಿಗೆ ಸೊಸೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಠಾಣೆಯ ಪೊಲೀಸರು ಆರೋಪಿ ಮೆಸ್ಕಾಂ ಮಹಿಳಾ ಉದ್ಯೋಗಿಯನ್ನು ಬಂಧಿಸಿದ್ದಾರೆ.
ನಗರದ ಅತ್ತಾವರದ ಮೆಸ್ಕಾಂನಲ್ಲಿ ಕ್ಯಾಷಿಯರ್ ಆಗಿರುವ ಕುಲಶೇಖರದ ಉಮಾಶಂಕರಿ (47) ಬಂಧಿತ ಆರೋಪಿ, ಕುಲಶೇಖರ ನಿವಾಸಿ ಪದ್ಮನಾಭ ಸುವರ್ಣ (88) ಹಲ್ಲೆಗೊಳಗಾದ ವೃದ್ಧರಾಗಿದ್ದಾರೆ.
ಪದ್ಮನಾಭ ಸುವರ್ಣ ತನ್ನ ಪುತ್ರ ಪ್ರೀತಂ ಸುವರ್ಣರ ಮನೆಯಲ್ಲಿದ್ದು, ಸೊಸೆ ಉಮಾಶಂಕರಿ ಕೂಡ ವಾಸವಾಗಿದ್ದಾರೆ. ಮನೆಯಲ್ಲಿ ಮಾ.9ರಂದು ಪದ್ಮನಾಭ ಸುವರ್ಣ ಅವರಿಗೆ ಉಮಾಶಂಕರಿ ವಾಕಿಂಗ್ ಸ್ಟಿಕ್ನಲ್ಲಿ ಹಲ್ಲೆ ಮಾಡುತ್ತಿರುವ ವೀಡಿಯೋವನ್ನು ವಿದೇಶದಲ್ಲಿರುವ ಪ್ರೀತಂ ಸುವರ್ಣ ವೀಕ್ಷಿಸಿದ್ದರು. ಇದರಿಂದ ನೊಂದುಕೊಂಡ ಪ್ರೀತಂ ಸುವರ್ಣ ತಕ್ಷಣ ಮೂಡುಬಿದಿರೆಯಲ್ಲಿರುವ ತನ್ನ ತಂಗಿಗೆ ವಿಷಯ ತಿಳಿಸಿ, ಸಿಸಿಟಿವಿ ದಾಖಲೆಯನ್ನು ನೀಡಿ ಪೊಲೀಸ್ ದೂರು ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಕಂಕನಾಡಿ ನಗರ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಪದ್ಮನಾಭ ಸುವರ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಉಮಾಶಂಖರಿಯ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








































