ಮಕ್ಕಳ ಕಳವು ಜಾಲ ಭೇದಿಸಿದ ಪೊಲೀಸರು: ನಸ್೯ಗಳಿಬ್ಬರ ಸಹಿತ ಒಟ್ಟು 7 ಮಂದಿ ಬಂಧನ

Picture of RB NEWS

RB NEWS

Bureau Report

ಅಲೆಮಾರಿ ಕುಟುಂಬದ ಮಗು ಕಳ್ಳತನ ಪ್ರಕರಣದ ತನಿಖೆಯು ತಿರುವು ಪಡೆದುಕೊಂಡಿದ್ದು, ಹಲವು ತಿಂಗಳುಗಳಿಂದ ಸಕ್ರಿಯವಾಗಿದ್ದ ಒಂದೇ ಗುಂಪು, ಬರೊಬ್ಬರಿ 9 ಮಕ್ಕಳನ್ನು ಕಿಡ್ನಾಪ್ ಮಾಡಿದ್ದಾರೆ. ಕದ್ದ ಮಕ್ಕಳನ್ನ 2 ರಿಂದ 3 ಲಕ್ಷ ರೂಪಾಯಿಗೆ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಕಳುವಾಗಿದ್ದ 9 ಮಕ್ಕಳ ಪೈಕಿ 5 ಮಕ್ಕಳನ್ನ ಪೊಲೀಸರು ರಕ್ಷಿಸಿದ್ದು, ಅದರಲ್ಲಿ 1 ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಇನ್ನುಳಿದ 3 ಮಕ್ಕಳಿಗಾಗಿ ತನಿಖಾ ತಂಡ ಶೋಧಕಾರ್ಯ ಮುಂದುವರಿಸಿದೆ.

ಪತ್ತೆಯಾಗಿದ್ದು …..

ಮಕ್ಕಳಿಲ್ಲದ ದಂಪತಿಗಳನ್ನ ಟಾರ್ಗೆಟ್ ಮಾಡುತ್ತಿದ್ದ ಈ ಮಕ್ಕಳ ಕಳ್ಳರ ಗ್ಯಾಂಗ್, ಗರ್ಭ ಧರಿಸಿದ ಅವಿವಾಹಿತ ಯುವತಿಯರಿಂದ ಮಕ್ಕಳನ್ನ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ. ಜತೆಗೆ, ಮಕ್ಕಳ ಕಳ್ಳತನಕ್ಕೂ ಇಳಿದಿದ್ದರು. ಸದ್ಯ ಪ್ರಕರಣ ಸಂಬಂಧ 7 ಜನ ಆರೋಪಿಗಳ ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಮಹೇಶ್ ಯು.ಡಿ, ಮಹಬೂಬ್ ಶರೀಫ್, ಕೆ.ಎನ್.ರಾಮಕೃಷ್ಣ, ಹನುನಂತರಾಜು, ಮುಬಾರಕ್ ಪಾಷಾ, ಪೂರ್ಣಿಮಾ ಎನ್. ಹಾಗೂ ಸೌಜನ್ಯ ಬಂಧಿತ ಆರೋಪಿಗಳು.

ಮಕ್ಕಳಿಲ್ಲದ ದಂಪತಿಗಳನ್ನ ಟಾರ್ಗೆಟ್ ಮಾಡುತ್ತಿದ್ದ ಒಂದನೆ ಆರೋಪಿ ಮಹೇಶ್, ಈ ಹಿಂದೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಸದ್ಯ ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದಾನೆ‌.

ಗುಬ್ಬಿಯಲ್ಲಿ ಮಗುವನ್ನ ಕಳವು ಮಾಡಿದ್ದ ಮೂರನೇ ಆರೋಪಿ ರಾಮಕೃಷ್ಣ ಹಾಗೂ ನಾಲ್ಕನೇ ಆರೋಪಿ ಹನುಮಂತರಾಜು, ಮಹೇಶ್ ಮೂಲಕ ಮಂಡ್ಯ ಜಿಲ್ಲೆ ಬೆಳ್ಳೂರು ಕ್ರಾಸ್ ಮೂಲದ ದಂಪತಿಗೆ ಮಗು ಮಾರಾಟ ಮಾಡಿದ್ದ. ಕಿಡ್ನಾಪ್ ಆಗಿದ್ದ 11 ತಿಂಗಳ ರಾಕಿಯನ್ನ ಪೊಲೀಸರು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ.

ಜಾತ್ರೆಗಳಲ್ಲಿ ಟ್ಯಾಟು ಹಾಕುವ ಕೆಲಸ ಮಾಡ್ತಿದ್ದ ರಾಮಕೃಷ್ಣ ಹಾಗೂ ಹನುಮಂತರಾಜು ಇಬ್ಬರನ್ನೂ ಹಿಡಿದು ತನಿಖೆ ನಡೆಸಿದಾಗ ಮಕ್ಕಳ ಮಾರಾಟ ಜಾಲ ಪ್ರಕರಣ ಬೆಳಕಿಗೆ ಬಂದಿದೆ. ಎರಡನೇ ಆರೋಪಿ ಮಹಬೂಬ್ ಶರೀಫ್ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ತನ್ನ ಪತ್ನಿ ಹೆಸರಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ. ಜೊತೆಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ವಿತರಣಾ ವಿಭಾಗದಲ್ಲಿ ಕೆಲಸ ಮಾಡ್ತಿದ್ದ. ತಮ್ಮ ಕ್ಲಿನಿಕ್ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ ಗಳ ಸಹಾಯದಿಂದ ಮಕ್ಕಳನ್ನ ಖರೀದಿ ಮಾಡುವ ಪೋಷಕರನ್ನು ಗರ್ಭಿಣಿಯರೆಂದು ದಾಖಲಿಸಿಕೊಂಡು, ಮಗು ಅವರಿಗೆ ಹುಟ್ಟಿದೆ ಎಂದು ನಕಲಿ ದಾಖಲೆಪತ್ರಗಳನ್ನು ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರಿ ಆಸ್ಪತ್ರೆ ಡಾಕ್ಟರ್, ನರ್ಸ್ ಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು ತನಿಖೆ ಚುರುಕುಗೊಳಿಸಲಾಗಿದೆ. ಬಂಧಿತ ಪೂರ್ಣಿಮಾ ಮಧುಗಿರಿ ತಾಲೂಕಿನ ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೋರ್ವ ಆರೋಪಿ ಸೌಜನ್ಯ ಶಿರಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇವರ ಮೇಲೆ ಈ ಹಿಂದೆ ಭ್ರೂಣ ಹತ್ಯೆ ಕೇಸ್ ಕೂಡ ದಾಖಲಾಗಿತ್ತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top