ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ವೃದ್ಧೆಯ ರಕ್ಷಣೆ

Picture of RB NEWS

RB NEWS

Bureau Report

ಉಡುಪಿ, ಜೂ.22, ಅನ್ನ ಇಲ್ಲ, ಚಹಾ ಕುಡಿದಿಲ್ಲ, ಮಳೆಯಲ್ಲಿ ಒದ್ದೆಯಾಗಿ ಅಸಹಾಯಕಳಾಗಿದ್ದೇನೆ, ರಕ್ಷಣೆ ಕೊಡಿ ಎಂದು ಸ್ಥಳೀಯರಲ್ಲಿ ಅಂಗಲಾಚುತ್ತಿದ್ದ ವೃದ್ಧೆಯನ್ನು ಸ್ಥಳೀಯರ ಮಾಹಿತಿ ಮೇರೆಗೆ ವಿಶು ಶೆಟ್ಟಿಯವರು ರಕ್ಷಿಸಿ, ಕಾರ್ಕಳ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ ಘಟನೆ ಜೂನ್ 22ರ ಸಂಜೆ ನಡೆದಿದೆ.

ಮಲ್ಪೆ ಠಾಣಾ ವ್ಯಾಪ್ತಿಯ ನಿಡಂಬಳ್ಳಿ ನಿವಾಸಿ ಗಿರಿಜಾ ಪೂಜಾರ್ತಿ(80) ಯ ಅಸಹಾಯಕ ಗೋಳಿನ ಕಥೆ: ಒಂಟಿ ಜೀವನ, ಇದ್ದ ಒಂದು ಪುಟ್ಟ ಗುಡಿಸಲು ಎಲ್ಲಾ ಬಿದ್ದು, ಒಂದು ಮೂಲೆಯಲ್ಲಿ ಮಳೆಯಿಂದ ರಕ್ಷಣೆಗೆ ಪ್ಲಾಸ್ಟಿಕ್ ಮಾಡಿನಡಿಯಲ್ಲಿ ವಾಸ, ಗುಡಿಸಲಿನ ಒಳಗೆ ಕಸ ಕಡ್ಡಿಗಳ ರಾಶಿ, ಕೊಳೆತ ವಸ್ತುಗಳು, ಮೂಲಭೂತ ಸೌಕರ್ಯವೇ ಇಲ್ಲದ ಸೊಳ್ಳೆಗಳ ಹಿಂಡು, ಗುಡಿಸಲು ಮನೆಯ ಸುತ್ತ ಗಿಡಗಂಟೆ ಒಂದು ಕಡೆ ವೃದ್ದಾಪ್ಯ, ಹೆಣ್ಣು ಮಕ್ಕಳು ಮೃತಪಟ್ಟಿದ್ದು, ಒಂಟಿಯಾಗಿ ಅನ್ನ ಆಹಾರ ಬೇಡಿ ಮಳೆಯಲ್ಲಿ ನೆಂದು ಬದುಕು ದುಸ್ತರ. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ವಿಶು ಶೆಟ್ಟಿ ಮಲ್ಪೆ ಠಾಣೆಗೆ ಮಾಹಿತಿ ನೀಡಿ ಸ್ಥಳೀಯರಾದ ಉಮೇಶ, ಹರೀಶ್ ಹಾಗೂ ಹರೀಶ್ ಉದ್ಯಾವರ ಸಹಾಯದಿಂದ ರಕ್ಷಿಸಿದ್ದಾರೆ. ವಿಶು ಶೆಟ್ಟಿ ವಿನಂತಿಗೆ ಆಶ್ರಮದ ಮುಖ್ಯಸ್ಥರಾದ ಶ್ರೀಮತಿ ತನುಲಾರವರು ಸ್ಪಂದಿಸಿದ್ದು, ವಿಶು ಶೆಟ್ಟಿ ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಸಂಬಂಧಪಟ್ಟವರು ಹೊಸಬೆಳಕು ಆಶ್ರಮಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ.

ಆಶ್ರಮಕ್ಕೆ ಸತೀಶ್ ಶೆಟ್ಟಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅಂಬಲಪಾಡಿ ಹಾಗೂ ವಿಶು ಶೆಟ್ಟಿ ತಲಾ ರೂ.5000/- ದಂತೆ ರೂ.10000/- ದೇಣಿಗೆ ನೀಡಿದರು.

ಜಿಲ್ಲಾಡಳಿತದ ಇಲಾಖೆಯಲ್ಲಿ ಇಂತಹ ಅಸಹಾಯಕ ಹಾಗೂ ಅಪಾಯಕಾರಿ ಜೀವನ ನಡೆಸುವವರ ರಕ್ಷಣೆ ಹಾಗೂ ಪಾಲನೆಗಾಗಿ ಹಲವು ಇಲಾಖೆಗಳ ಜವಾಬ್ದಾರಿ ಇದೆ. ವೃದ್ಧೆಯ ಈ ಅಸಹಾಯಕ ಜೀವನದ ಬಗ್ಗೆ ಇಲಾಖೆಯ ಮೌನ ನಮ್ಮ ಜಿಲ್ಲೆಗೆ ಒಂದು ಕಪ್ಪು ಚುಕ್ಕೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದ ಹಾಗೆ ಜಾಗೃತರಾಗಿ ಈ ಮಹಿಳೆಯ ಬಗ್ಗೆ ತುರ್ತು ಸಹಕಾರ ನೀಡುವ ಕೆಲಸ ನೆರವೇರಲಿ. – ವಿಶು ಶೆಟ್ಟಿ ಅಂಬಲಪಾಡಿ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top