ನಲ್ಲೂರು ಪರಪ್ಪಾಡಿ ಬಸ್ ತಂಗುದಾಣದಲ್ಲಿ ಸ್ವಚ್ಛತೆ ಮರೀಚಿಕೆ; ಆರೋಗ್ಯ ಕೇಂದ್ರದ ಸಮೀಪವೇ ಕೊಳಕು
RB NEWS
Bureau Report
ನಲ್ಲೂರು ಪರಪ್ಪಾಡಿ ಬಸ್ ತಂಗುದಾಣದಲ್ಲಿ ಸ್ವಚ್ಛತೆ ಮರೀಚಿಕೆ; ಆರೋಗ್ಯ ಕೇಂದ್ರದ ಸಮೀಪವೇ ಕೊಳಕು
ಕಾರ್ಕಳ: ನಲ್ಲೂರು ಪರಪ್ಪಾಡಿಯ ಬಸ್ ತಂಗುದಾಣ ಸ್ವಚ್ಛತೆಯ ಕೊರತೆಯಿಂದ ಗಬ್ಬೆದ್ದು ನಾರುತ್ತಿರುವ ಸ್ಥಿತಿಗೆ ತಲುಪಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಂಗುದಾಣದೊಳಗೆ ಕಸ, ಕೊಳೆತ ವಸ್ತುಗಳು ಹಾಗೂ ನೀರು ನಿಂತಿರುವುದು ಕಂಡುಬಂದಿದ್ದು, ಇದೇ ಜಾಗದಲ್ಲಿ ಓಂಕಾರ ಧ್ವಜ ಹಾಗೂ ಕೇಸರಿ ತಳಿರು ತೋರಣಗಳನ್ನು ಎಸೆಯಲಾಗಿದೆ. ಧರ್ಮ ಪ್ರಚಾರಕ್ಕೆ ಬಳಸಲಾಗಿದ್ದ ನಿರುಪಯುಕ್ತ ಪ್ಲಕ್ಸ್ವೊಂದು ಕೂಡ ತಂಗುದಾಣದೊಳಗೆ ನೇತಾಡುತ್ತಿರುವುದು ಕಂಡುಬರುತ್ತಿದೆ. ತಂಗುದಾಣದ ಪರಿಸ್ಥಿತಿಯನ್ನು ಗಮನಿಸಿದರೆ, ಸಾರ್ವಜನಿಕರು ಕುಳಿತುಕೊಳ್ಳಲು ಕೂಡ ಅಸಹ್ಯಪಡುವಂತಾಗಿದೆ. ವಿಶೇಷವೆಂದರೆ, ಈ ಪರಿಸರದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದ್ದು, ಅದರ ಸಮೀಪದಲ್ಲಿರುವ ಸಾರ್ವಜನಿಕ ಬಳಕೆಯ ಸ್ಥಳವೊಂದು ಇಂತಹ ಅಸ್ವಚ್ಛ ಸ್ಥಿತಿಯಲ್ಲಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಮಳೆ ನೀರು ಹಾಗೂ ಕೊಳಕು ಒಂದೆಡೆ ಸೇರಿಕೊಂಡಿರುವುದರಿಂದ ದುರ್ವಾಸನೆ ಹರಡುತ್ತಿದ್ದು, ಸ್ವಚ್ಛತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಯ ಮಹತ್ವವನ್ನು ಸಾರುತ್ತಾ ‘ಸ್ವಚ್ಛ ಭಾರತ’ ಅಭಿಯಾನದ ಮೂಲಕ ಆಗಾಗ್ಗೆ ಕರೆ ನೀಡುತ್ತಿದ್ದರೂ, ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬಸ್ ತಂಗುದಾಣದ ಸ್ಥಿತಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿರುವಂತಿದೆ. ಸಾರ್ವಜನಿಕರು ಪ್ರತಿನಿತ್ಯ ಬಳಸುವ ಬಸ್ ತಂಗುದಾಣವನ್ನು ಸ್ವಚ್ಛವಾಗಿಡುವುದು ಗ್ರಾಮ ಪಂಚಾಯತ್ನ ಜವಾಬ್ದಾರಿಯಾಗಿದೆ. ತಕ್ಷಣವೇ ತಂಗುದಾಣವನ್ನು ಸ್ವಚ್ಛಗೊಳಿಸಿ, ಬಿದ್ದಿರುವ ಕಸ ಹಾಗೂ ಅನಗತ್ಯ ವಸ್ತುಗಳನ್ನು ತೆರವುಗೊಳಿಸಿ, ಮುಂದಿನ ದಿನಗಳಲ್ಲಿ ನಿಯಮಿತ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸ್ವಚ್ಛತೆಯ ಬಗ್ಗೆ ಭಾಷಣ, ಪ್ರಚಾರ ಮತ್ತು ಘೋಷಣೆಗಳು ನಡೆಯುತ್ತಲೇ ಇದ್ದರೂ, ನೆಲಮಟ್ಟದಲ್ಲಿ ಮಾತ್ರ ಪರಿಸ್ಥಿತಿ ಬದಲಾಗದಿರುವುದು ‘ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ’ ಎಂಬಂತಾಗಿದೆ.