ಮಂಗಳೂರಿನ ಮಟ್ಟಿಗೆ ಡಿವೈಎಫ್ಐ ಯುವಜನರ ಒಂದು ಸಣ್ಣ ಗುಂಪು. ಆದರೆ ಇಡೀ ಕರಾವಳಿಯಲ್ಲಿ ಈ ಸಣ್ಣ ಯುವಜನರ ಗುಂಪು ಮಾಡಿರುವ ಮತ್ತು ಮಾಡುತ್ತಿರುವ ಹೋರಾಟ, ಚಟುವಟಿಕೆಗಳು ಕರಾವಳಿಯಲ್ಲಿ ಮಾಡಿರುವ ಪರಿಣಾಮ ಮಾತ್ರ ಅಗಾಧವಾದದ್ದು.
ಕರಾವಳಿಯ ಜನಜೀವನದ ಸಂಕಷ್ಟಗಳ ಸಂದರ್ಭಗಳಿಗೆ ಸ್ಪಂದಿಸುವ ರೀತಿ ಅನನ್ಯ. ಹಿಂದೂತ್ವವಾದಿಗಳ ದೌರ್ಜನ್ಯದ ವಿರುದ್ಧ, ಕೋಮುವಾದಿ ಸಂಘಟನೆಗಳ ವಿರುದ್ಧ, ದಲಿತ-ದಮನಿತರ ಪರವಾಗಿ ಸದಾ ಸೆಟೆದು ನಿಲ್ಲುವ ಯುವಕರ ಈ ಪಡೆ ಕರಾವಳಿಯ ಅಲ್ಪಸಂಖ್ಯಾತರಲ್ಲಿ, ದಲಿತ-ದಮನಿತರಲ್ಲಿ ತುಂಬಿರುವ ಧೈರ್ಯ, ವಿಶ್ವಾಸ ದೊಡ್ಡದು.
ಕಾರ್ಮಿಕ ಚಳವಳಿಗಳು, ಕೈಗಾರಿಕೋದ್ಯಮಿಗಳಿಂದ ಆಗುವ ಅನ್ಯಾಯದ ವಿರುದ್ಧದ ಹೋರಾಟ, ಕೈಗಾರಿಕೆಗಳ ಹೆಸರಿನಲ್ಲಿ ಬಂಡವಾಳಶಾಹಿಗಳು ಬಡವರ ಭೂಕಬಳಿಕೆ ಮಾಡುವುದರ ವಿರುದ್ಧದ ಪ್ರತಿಭಟನೆಗಳು ಹೀಗೆ ಈ ತಂಡ ಮಾಡುವ ಜನಪರ, ಜೀವಪರ ಚಳವಳಿಗಳಿಂದ ಈ ಜಿಲ್ಲೆಯ ಜನರಿಗೆ ಆದ ಪ್ರಯೋಜನಗಳು ಅಪಾರ.
ಕೇವಲ ಸುರತ್ಕಲ್ನ ಅನಧಿಕೃತ ಟೋಲ್ ಗೇಟ್ ವಿರುದ್ಧ ಹೋರಾಟವನ್ನೇ ತೆಗೆದುಕೊಳ್ಳಿ, ಹೋರಾಟದ ನೇತೃತ್ವ ವಹಿಸಿದ್ದ ಮುನೀರ್ ಕಾಟಿಪಳ್ಳ ಮತ್ತವರ ತಂಡ ಇಡೀ ಹೋರಾಟಕ್ಕೆ ನೀಡಿದ ಬೆಂಬಲ ಈ ಹೋರಾಟದ ಯಶಸ್ಸಿಗೆ ದೊಡ್ಡ ಕೊಡುಗೆ.
ಸಣ್ಣ ಯುವಜನರ ತಂಡವೊಂದು ಹೀಗೆ ಪರಿಣಾಮಕಾರಿಯಾಗಿ ಜನರ ನಡುವೆ, ಜನಪರವಾಗಿ ಕೆಲಸ ಮಾಡಲು ಕಾರಣ ಅವರ ಓದು, ತಿಳುವಳಿಕೆ, ಬದ್ದತೆ ಮತ್ತು ಈ ಸಮಾಜಕ್ಕೆ ಒಳಿತು ಮಾಡುತ್ತಲೇ ಇರಬೇಕು ಎಂಬ ದೃಢ ನಿಶ್ಚಯ.
ನಾನು ಹೈಸ್ಕೂಲು ದಿನಗಳಿಂದಲೇ ಎಸ್ ಎಫ್ ಐ ನಲ್ಲಿ ಸಕ್ರಿಯನಾಗಿದ್ದವನು. ಎಸ್ ಎಫ್ ಐ ಸಂಪರ್ಕಕ್ಕೆ ಬರದೆ ಬೇರಾವುದೋ ಸಂಘಟನೆಗಳ ಸಂಪರ್ಕಕ್ಕೆ ಬಂದಿದ್ದರೆ ಇಂದು ಇಮಲ್ ಗುಟ್ಕಾ ಮೆಲ್ಲುತ್ತಾ ಕೇಸರಿ ಶಾಲು ಹಾಕಿಕೊಂಡು ಉದ್ದ ಕೆಂಪು ನಾಮ ಎಳೆದುಕೊಂಡು ಯಾವ ದೇವಸ್ಥಾನದ ಜಾತ್ರೆಯಲ್ಲಿ ಸಾಬರು ಅಂಗಡಿ ಇಡಕೂಡದು ಎಂದು ಓರಾಟ ಮಾಡುತ್ತಿದೇನೊ ಏನೋ. ಯೋಚಿಸಲಿಕ್ಕೂ ಕಷ್ಟ ಆಗುತ್ತಿದೆ. ಕುಂದಾಪುರದಲ್ಲಿ ಇಂದಿಗೂ ನನ್ನ ಜೊತೆಗಿರುವವರು ಡಿವೈಎಫ್ಐನ ಪ್ರಜ್ಜಾವಂತ ಮಿತ್ರರು.
ಫೆಬ್ರವರಿ 25 ರಂದು ಮಂಗಳೂರಿನಲ್ಲಿ ಡಿವೈಎಫ್ಐ ರಾಜ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನಕ್ಕೆ ಎಲ್ಲ ರೀತಿಯ ಯಶಸ್ಸು ಕೋರುತ್ತೇನೆ. ಮುನೀರ್ ಕಾಟಿಪಳ್ಳ ಮತ್ತು ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಸಮ್ಮೇಳನ ನಿಮ್ಮ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಲಿ. ಕರಾವಳಿಯಲ್ಲಿ ನಿತೀನ್ ಕುತ್ತಾರ್, ಸುನೀಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ಬಿ ಕೆ ಇಮ್ತಿಯಾಜ್ ಮುಂತಾದ ಸಂಗಾತಿಗಳ ಸಂತತಿ ಸಾವಿರವಾಗಲಿ.
ಜಿಂದಾಬಾದ್ ಜಿಂದಾಬಾದ್, ಡಿವೈಎಫ್ಐ ಜಿಂದಾಬಾದ್

ಶಶಿಧರ ಹೆಮ್ಮಾಡಿ, ಪತ್ರಕರ್ತರು






































