ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ‘ಕಣಿಪುರ’ದ ಚಂಬಲ್ತಿಮಾರ್ ಗೆ ರಾಷ್ಟ್ರೀಯ ಸನ್ಮಾನ
ಕುಂಬಳೆ: ಪಾರ್ತಿಸುಬ್ಬನ ನೆಲದಿಂದ ಯಕ್ಷಗಾನಕ್ಕೆ ಸೃಜನಶೀಲ ಮಾಧ್ಯಮ ಸಂಸ್ಕೃತಿಯ ಪತ್ರಿಕೆ ‘ಕಣಿಪುರ’ ವನ್ನು ನೀಡುತ್ತಿರುವ ಕಾಯಕ ಗುರುತಿಸಿ ಅದರ ಪ್ರಧಾನ ಸಂಪಾದಕ, ಲೇಖಕ ಎಂ.ನಾ. ಚಂಬಲ್ತಿಮಾರ್ ಅವರನ್ನು ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ರಾಷ್ಟ್ರೀಯ ಸನ್ಮಾನವನ್ನಿತ್ತು ಗೌರವಿಸಲಾಯಿತು.
ಉ.ಕ ದ ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಕಳೆದ 14ವರ್ಷಗಳಿಂದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ನಡೆಯುತ್ತಿದೆ. ಇದರಲ್ಲಿ ವರ್ಷಂಪ್ರತಿ ಕಲಾ,ಸಂಸ್ಕೃತಿ,ಸಾಹಿತ್ಯ ಕೊಡುಗೆಯ ಸಾಧಕರನ್ನು ಗುರುತಿಸಿ ನಗದುಪುರಸ್ಕಾರ ಸಹಿತ ಸನ್ಮಾನಿಸುವುದು ವಾಡಿಕೆಯಾಗಿದೆ.
ಮಾ.16ರಂದು ಆರಂಭಗೊಂಡು 20ರಂದು ಸಮಾಪ್ತಿಯಾದ ರಾಷ್ಟ್ರೀಯ ನಾಟ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ನಡೆದಿದ್ದು, ಹಿರಿಯ ಸಾಹಿತಿ ಜಿ.ಎಸ್.ಭಟ್ಟ ಮೈಸೂರು ಅಧ್ಯಕ್ಷತೆ ವಹಿಸಿದರು. ಉ.ಕ.ಜಿಲ್ಲಾ ಭಾಜಪ ಅಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ , ಡಾ.ಶ್ರೀಧರ ಹೆಗಡೆ ಮಡಿಕೇರಿ, ಊರ ಮುಖಂಡ ಗಣಪಯ್ಯ ಗೌಡ, ಶುಂಠಿ ಸತ್ಯನಾರಾಯಣ ಭಟ್ ಸಾಗರ, ಡಾ.ಮೋಹನ ಕುಂಟಾರ್ ಹಂಪಿ ಉಪಸ್ಥಿತರಿದ್ದರು. ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ನೇತೃತ್ವದಲ್ಲಿ ನಾಟ್ಯೋತ್ಸವ ನಡೆಯುತ್ತಿದ್ದು, ಅದರ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಸ್ವಾಗತಿಸಿದರು.




























