
ಕಾರ್ಕಳ: ಮಾಳ ಕೋಟೆ ಬಸದಿಯಲ್ಲಿ 5 ಅಪರೂಪದ ಜಿನ ಶಾಸನಗಳ ಪತ್ತೆ
ಸಂಶೋಧಕ ಶ್ರುತೇಶ್ ಆಚಾರ್ಯರಿಂದ ಸಮಗ್ರ ಅಧ್ಯಯನ; ಕೋಟೆ ಬಸದಿಯ ಇತಿಹಾಸಕ್ಕೆ ಹೊಸ ಪುರಾವೆ
ಕಾರ್ಕಳ, ಆ. 27: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಕೋಟೆ ಬಸದಿಯಲ್ಲಿ ಐದು ಪ್ರಾಚೀನ ಜಿನ ಶಾಸನಗಳು ಪತ್ತೆಯಾಗಿದ್ದು, ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನಕ್ಕೆ ಮಹತ್ವದ ದಾಖಲೆಗಳು ಲಭ್ಯವಾಗಿವೆ.
ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ರಾಜಗುರು ಪೀಠದ ಪರಂಪರೆಗೆ ಒಳಪಟ್ಟಿರುವ ಕೋಟೆ ಬಸದಿಯಲ್ಲಿ ಆದಿನಾಥ ತೀರ್ಥಂಕರ, ನೇಮಿನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಹಾಗೂ ಪದ್ಮಾವತಿ ದೇವಿಯ ಸನ್ನಿಧಿಗಳಿವೆ. ಅನಾದಿ ಕಾಲದಿಂದ ಪೆರ್ಮುಡೆ ಗುತ್ತು, ಸೌಟಬೆಟ್ಟು ಗುತ್ತು, ಕೊಡಂಗೆ ಗುತ್ತು ಮನೆತನಗಳವರು ಹಾಗೂ ಜೈನ ಸಮಾಜದವರು ಈ ಸನ್ನಿಧಿಗಳನ್ನು ಆರಾಧಿಸಿಕೊಂಡು ಬಂದಿದ್ದಾರೆ.







































