ಕಾರ್ಕಳ ಇರ್ವತ್ತೂರಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆ
ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮ ಪಂಚಾಯತ್ ನ ಕೋರಂಜೆ ಅನಂತಬೆಟ್ಟು ಬಳಿ ನಿರ್ಮಿಸಲ್ಪಟ್ಟಿರುವ ಕೇವಲ ಒಂದು
ವಾಹನ ಮಾತ್ರ ಹೋಗಲು ಸಾಧ್ಯವಿರುವ ಸೇತುವೆಯು ಬೀಳುವ ಹಂತಕ್ಕೆ ಸಿದ್ಧಗೊಂಡಿದೆ. ಈಗಾಗಲೇ ಪಶ್ಚಿಮ ಬದಿಯ ಮಧ್ಯದ
ತಡೆಗೋಡೆ ನೀರಿನಲ್ಲಿ ಬಿದ್ದು ಕೊಚ್ಚಿ ಹೋಗಲು ತಯಾರಾಗಿದೆ. ಇನ್ನುಳಿದ ಅರ್ಧ ಈಗಲೂ-ಆಗಲು ಬೀಳುವ ಸಿದ್ಧತೆಯಲ್ಲಿ ದಿನ
ಕಳೆಯುತ್ತಿದೆ. ಈ ವರ್ಷದ ಪ್ರಾರಂಭದ ಈ ಮಳೆಗೇ ಹೀಗಾಗಿರುವಾಗ ಮುಂದಿನ ಪರಿಸ್ಥಿತಿಯನ್ನು ನೀವೇ ಊಹಿಸಿಕೊಳ್ಳಿ.
ಸಾಣೂರು-ಇರ್ವತ್ತೂರನ್ನು ಬೆಳುವಾಯಿ, ಮೂಡು ಮಾರ್ನಾಡು, ಧರೆಗುಡ್ಡೆ, ಶಿರ್ಥಾಡಿ, ಇತ್ಯಾದಿ ಪ್ರದೇಶಗಳನ್ನು ಅತ್ಯಂತ
ಸಮೀಪದಲ್ಲಿ ಸಂಧಿಸಲು ಹಾಗೂ ಒಂದು ವೇಳೆ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿರುವ ಸಾಣೂರು-ಬೆಳುವಾಯಿ ನಡುವೆ
ಯಾವುದೇ ತೊಂದರೆ ಸಂಭವಿಸಿದಲ್ಲಿ ಸಂಪರ್ಕಿಸಲು ಇರುವ ಒಂದೇ ಒಂದು ಮಾರ್ಗದ ಸಂಪರ್ಕ ಸೇತುವೆ ಇದಾಗಿದೆ. ಈ
ಸಂಪರ್ಕ ಸೇತುವೆ ಇನ್ನಷ್ಟು ಘಾಸಿಗೊಂಡು ಸೇತುವೆಯೇ ಮುರಿದು ಬಿದ್ದಲ್ಲಿ ಗ್ರಾಮೀಣ ಜನತೆಯೊಂದಿಗೆ ಇತರರಿಗೂ ಬಹಳ
ತ್ರಾಸದಾಯಕ ವಾಗಲಿದೆ. ಆದುದರಿಂದ ಸಾಮಾಜಿಕ ಕಾರ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಕಾರ್ಕಳದಾದ್ಯಂತ ಉತ್ತಮ
ಗುಣಮಟ್ಟದ ಬಹಳ ಅಗಲವಾದ ರಸ್ತೆಯನ್ನು ನಿರ್ಮಾಣ ಗೈದು ಖ್ಯಾತಿವೆತ್ತ ಕಾರ್ಕಳದ ಮಾನ್ಯ ಶಾಸಕರು, ಮಾಜಿ ಸಚಿವರು
ಆದ್ಯತೆಯ ನೆಲೆಯಲ್ಲಿ ಸಾಧ್ಯವಾದರೆ ದ್ವಿಪಥದ ಸೇತುವೆಯನ್ನು ನಿರ್ಮಿಸಿ ಗ್ರಾಮೀಣ ಜನರ ಸುಗಮ ಸಂಚಾರಕ್ಕೆ ಅನುವು
ಮಾಡಿಕೊಡಬೇಕೆಂದು ಇರ್ವತ್ತೂರು ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ.

ಸಚಿತ್ರ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ .






































