ಉಡುಪಿ ತಾಲೂಕು ಕಸಾಪ ದಿಂದ ಸಂಸ್ಥಾಪನ ದಿನಾಚರಣೆ ಹಾಗೂ ಉಪನ್ಯಾಸ
ಉಡುಪಿ: ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ಮತ್ತು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಉಡುಪಿ ಇವರ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ೧೧೦ ನೇ ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವು ಮೇ ಏಳರಂದು ಮಂಗಳವಾರ ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ನಲ್ಲಿ ನಡೆಯಿತು.
ಸಮಾರಂಭವನ್ನು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಿದರು.
ಡಾ. ಕೋಟ ಶಿವರಾಮ ಕಾರಂತ ದತ್ತಿ ಉಪನ್ಯಾಸ ನೀಡಿದ ಸಾಹಿತಿ ಡಾ. ನಿಕೇತನ, ಕಾರಂತರ ಕೃತಿಗಳು ಓದುಗರನ್ನು ಸಹೃದಯಿಗಳನ್ನಾಗಿ ಮಾಡುತ್ತದೆ. ವೈಚಾರಿಕ ದೃಷ್ಟಿಕೋನ ಬೆಳೆಸುತ್ತದೆ. ಪದವೀಧರರು ವಿದ್ಯಾವಂತರೆನಿಸಿಕೊಳ್ಳುವುದಿಲ್ಲ. ವಿದ್ಯೆಯ ಜೊತೆಗೆ ವಿವೇಕ ಮೂಡಲು ಸಾಹಿತ್ಯ ಓದಬೇಕು. ಬದುಕನ್ನು ಸಂಭ್ರಮಿಸಬೇಕಾದರೆ ವರ್ತಮಾನದಲ್ಲಿ ಜೀವಿಸಬೇಕು. ಇದರಿಂದ ವ್ಯಕ್ತಿ ಶಕ್ತಿಯಾಗಲು ಸಾಧ್ಯ. ಸಣ್ಣ ವಿಷಯಗಳಿಗೆ ಆತ್ಮಹತ್ಯೆಗೆ ಮುಂದಾಗುವ ಎಳೆ ಮನಸ್ಸುಗಳು ಕಾರಂತರ ಕೃತಿಗಳನ್ನು ಓದಿದರೆ ಅಂಥ ಆಲೋಚನೆಗಳೇ ಹುಟ್ಟುಕೊಳ್ಳುವುದಿಲ್ಲ. ಬದುಕಿನ ಅನನ್ಯತೆ ಅರಿವಾಗುತ್ತದೆ ಎಂದು ಹೇಳಿದರು.






































