ಕೋಲಾರ: ಎರಡು ಗುಂಪುಗಳ ನಡುವಿನ ಘರ್ಷಣೆ ವೇಳೆ ಸ್ವಾಮೀಜಿಯೊಬ್ಬರು ಕೊಲೆಯಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದಲ್ಲಿ ನಡೆದಿದೆ.‘ಆಚಾರ್ಯ ಚಿನ್ಮಯಾನಂದ’ (65) ಹತ್ಯೆಯಾದ ಸ್ವಾಮೀಜಿ.

ಆಚಾರ್ಯ ಧರ್ಮ ಪ್ರಾಣಾನಂದ ಅವರ ಗುಂಪಿನಿಂದ ಹತ್ಯೆ ನಡೆದಿದೆ. ಈ ಕುರಿತು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಾಲೂರು ತಾಲೂಕು ಸಂತಳ್ಳಿ ಗ್ರಾಮದ ನಾಲ್ಕು ಎಕರೆ ಆಶ್ರಮದ ಜಾಗಕ್ಕಾಗಿ ಬಹುದಿನಗಳಿಂದ ವಿವಾದ ನಡೆಯುತ್ತಿತ್ತು. ಕಳೆದ ಹಲವು ವರ್ಷಗಳಿಂದ ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ಶನಿವಾರ ಬೆಳಗ್ಗೆ ಕೋರ್ಟ್ಗೆ ದಾಖಲೆ ಸಹಿತ ಹೋಗುವ ವೇಳೆ ಸ್ವಾಮೀಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.


ಗಂಭೀರ ಗಾಯಗೊಂಡ ಚಿನ್ಮಯಾನಂದ ಅವರನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆ ಫಲಿಸಿದೆ ಕೊನೆಯುಸಿರೆಳೆದಿದ್ದಾರೆ.

ಆರೋಪಿಗಳಾದ ಆಚಾರ್ಯ ಧರ್ಮ ಪ್ರಾಣಾನಂದ(45) , ಪ್ರಾಣೇಶ್ವರಾನಂದ ಸ್ವಾಮೀಜಿ(48) ಹಾಗೂ ಆಶ್ರಮದ ಮಾಜಿ ಸಿಬ್ಬಂದಿ ಅರುಣ್ ಎಂಬುವರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧಾ ಕಾರ್ಯಚರಣೆ ನಡೆಸುತ್ತಿದ್ದಾರೆ.






































