ಪರಸ್ತ್ರೀ ಅಪಹರಣ ಭೂಷಣವಲ್ಲ
ಮಂಗಲಂ ಕೋಸಲೇಂದ್ರಾಯ ರಾಮಾಯಣ ಉಪನ್ಯಾಸ ಮಾಲೆ
ಕಾರ್ಕಳ : ಪರಸ್ತ್ರೀ ಅಪಹರಣ ಭೂಷಣವಲ್ಲ. ಅಂಥವರಿಂದ ವಿನಾಶ ಕಂಡ ಅನೇಕ ಉದಾಹರಣೆಗಳಿವೆ. ಯುದ್ಧಕ್ಕೆ ಭುಜಬಲ ಒಂದೇ ಸಾಲದು ಧರ್ಮದ ಬಲವೂ ಬೇಕು. ಶ್ರೀರಾಮನು ಸಾಮಾನ್ಯ ಮನುಷ್ಯನಲ್ಲ. ಆತನಲ್ಲಿ ದೈವಬಲದ ಶಕ್ತಿ ಇರುವುದರಿಂದ ನೀನು ವಿವೇಚನೆಯನ್ನು ಕಳೆದುಕೊಳ್ಳದೆ ಸೀತೆಯನ್ನು ರಾಮನಿಗೆ ಒಪ್ಪಿಸು ಎಂಬ ತಮ್ಮ ವಿಭೀಷಣದ ಮಾತಿಗೆ ಕುಪಿತನಾದ ರಾವಣ ವಿಭೀಷಣನನ್ನೂ ಹೊರಗೆ ಹಾಕಿದ. ಹಾಗೆ ಅಲ್ಲಿಂದ ಹೊರಬಿದ್ದ ವಿಭೀಷಣ ಶ್ರೀರಾಮನ ರಕ್ಷಣೆಯನ್ನು ಪಡೆಯುತ್ತಾನೆ ಎಂಬುದಾಗಿ ಪ್ರಸಿದ್ಧ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ೨೦೨೫ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಈ ಮಾಲೆಯ ಕೊನೆಯ ಕಾರ್ಯಕ್ರಮ ದ್ವಾದಶ ಸೋಪಾನ ‘ ಮಂಗಲಂ ಕೋಸಲೇಂದ್ರಾಯ’ ಎಂಬ ವಿಷಯದ ಕುರಿತು ಡಿಸೆಂಬರ್ ೧೩ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು.
ಯುದ್ಧದಿಂದಾಗುವ ಹಾನಿಗಳನ್ನು ತಪ್ಪಿಸುವುದಕ್ಕಾಗಿ ರಾವಣನ ಜೊತೆ ಸಂಧಾನಕ್ಕಾಗಿ ಅಂಗಧನನ್ನು ಕಳಿಸಿದರೂ ಆತನ ವಿವೇಕದ ಮಾತುಗಳನ್ನು ರಾವಣ ಕೇಳಲೇ ಇಲ್ಲ. ಯುದ್ಧ ಅನಿವಾರ್ಯ ವಾಗಿ ರಾವಣನ ವಧೆಯಾಗಿ ವಿಭೀಷಣನಿಗೆ ಪಟ್ಟವನ್ನು ಕಟ್ಟಿ ಶ್ರೀರಾಮ ಸೀತೆಯೊಂದಿಗೆ ಮತ್ತೆ ಅಯೋಧ್ಯೆಗೆ ಮರಳಿದ ಎಂದು ಉಪನ್ಯಾಸಕ್ಕೆ ಮಂಗಲವನ್ನು ಹಾಡಿದರು.ಡಾ.ನಾ.ಮೊಗಸಾಲೆ, ಮಿತ್ರಪ್ರಭಾ ಹೆಗ್ಡೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರ್ವರಿ ಪ್ರಾರ್ಥಿಸಿದರು. ಸುಲೋಚನಾ ಬಿ.ವಿ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ನಿತ್ಯಾನಂದ ಪೈ ವಂದಿಸಿದರು.
Post Views: 163





































