ಸಾಣೂರು : ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ
ಮಂಗಳೂರು- ಕಾರ್ಕಳ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ -169 ರ ಸಾಣೂರು ಪರಿಸರವು ಹಲವು ಸಮಸ್ಸೆಗಳ ತಾಣವಾಗಿ ಪರಿವರ್ತಿಸಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ವು ಜುಲಾಯಿ 12ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ಕಲೆ ಹಾಕಿದೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ,ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಶಾಸಕ ವಿ. ಸುನೀಲ್ ಕುಮಾರ್ , ಕುಂದಾಪುರ ಉಪವಿಭಾಗ ಆಯುಕ್ತರಾದ ರಶ್ಮಿ,
ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್ , ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ತ ಎನ್, ಭೂಸ್ವಾಧೀನಾಧಿಕಾರಿ ಇಸಾಕ್ ಮಹಮ್ಮದ್ ಇದ್ದರು.

ಸಾಣೂರು ಯುವಕ ಮಂಡಲದ ಕಟ್ಟಡದ ಮುಂಭಾಗದ ಮೈದಾನದ ಬದಿಯಲ್ಲಿ ಉದ್ದಕ್ಕೂ ಗುಡ್ಡ ಜರಿದಿದ್ದು 220 ಕೆವಿ ಹೈಟೆನ್ಶನ್ ಗೋಪುರ, ಪಕ್ಕದ ತಲಾ 50ಸಾವಿರ ಲೀ. ಸಾಮರ್ಥ್ಯದ 2 ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಮತ್ತು ತೆರೆದ ಬಾವಿಯ ಪ್ರದೇಶ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಸಾಣೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಸಾದ್ ಪೂಜಾರಿಯವರು ತಿಳಿಸಿದರು
ಗುಡ್ಡಜರಿತದ ಭಾಗಕ್ಕೆ ತಕ್ಷಣ ತಡೆಗೋಡೆ ನಿರ್ಮಾಣ ಕಾರ್ಯವನ್ನು ಒಂದು ವಾರದೊಳಗೆ ಕೈಗೆತ್ತಿಕೊಳ್ಳಬೇಕು ಹಾಗೂ 3 ತಿಂಗಳೊಳಗೆ ಅದನ್ನು ಮುಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಮತ್ತು ಡಿಬಿಎಲ್ ಗುತ್ತಿಗೆದಾರ ಕಂಪನಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
60 ಮೀಟರ್ ಉದ್ದಕ್ಕೆ ಈಗಾಗಲೇ ಕಾರ್ಯಾದೇಶ ದೊರೆತಿದ್ದು ಉಳಿದ 30 ಮೀಟರ್ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗುವುದು ಎಂದು ಬಿ ಬಿ ಎಲ್ ಕಂಪನಿಯ ಬಾಲಾಜಿ ತಿಳಿಸಿದರು.
ಕಳೆದ ಒಂದು ವರ್ಷದ ಹಿಂದೆಯೇ ಈ ಕುರಿತು ಎಚ್ಚರಿಕೆ ನೀಡಿದ್ದರೂ ಅದನ್ನು ಕಡೆಗಣಿಸಿ ತಾತ್ಕಾಲಿಕವಾಗಿ ತಾರ್ಪಾಲು ಹೊದಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಶಾಸಕ ವಿ. ಸುನಿಲ್ ಕುಮಾರ್ ತರಾಟೆಗೆ ಎಳೆದುಕೊಂಡು ಸಂಭಾವ್ಯ ಅಪಾಯದಿಂದ ತಪ್ಪಿಸಲು ಸುರಕ್ಷತಾ ಕಾಮಗಾರಿಗಳನ್ನು ಕೂಡಲೇ ಕೈಗೆತ್ತುಕೊಳ್ಳುವಂತೆ ಸೂಚಿಸಲಾಯಿತು.
ಸಾಣೂರು ಪದವಿಪೂರ್ವ ಕಾಲೇಜಿಗೆ ಹೋಗುವ ರಸ್ತೆ ಬದಿಯಲ್ಲಿ ತಡೆಗೋಡೆಯ ಒಳಭಾಗದಲ್ಲಿ ಕೆಲವೊಂದು ಕಡೆ ಸುಮಾರು 8-10 ಅಡಿಯಷ್ಟು ಗೋಡೆಕಲ್ಲು ಬಿದ್ದಿದೆ.
ಅದನ್ನು ಕೂಡಲೇ ಮಣ್ಣು ಹಾಕಿ ಸರಿಪಡಿಸುವಂತೆ ಶಾಸಕ ವಿ. ಸುನಿಲ್ ಕುಮಾರ್ ರವರು ನಿರ್ದೇಶನ ನೀಡಿದರು.

ಸಾಣೂರು ಪದವಿ ಪೂರ್ವ ಕಾಲೇಜಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಹಾಕಿರುವ ವಿದ್ಯುತ್ ಕಂಬಗಳನ್ನು ಸುರಕ್ಷಿತ ಅಂತರಕ್ಕೆ ಎತ್ತರಿಸಿ ವಿದ್ಯುತ್ ತಂತಿಗಳು ಅಪಾಯಕಾರಿಯಾಗಿ ಕೆಳಮಟ್ಟದಲ್ಲಿ ಹಾದುಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ವಿದ್ಯಾರ್ಥಿಗಳು ಓಡಾಡುವಲ್ಲಿ ಮಣ್ಣು ತುಂಬಿಸಿ ಸರಿಪಡಿಸುವುದಲ್ಲದೇ ರಾಷ್ಟ್ರೀಯ ಹೆದ್ದಾರಿಯಿಂದ ಕಾಲೇಜು ತನಕದ ರಸ್ತೆಯನ್ನು ಡಾಂಬರೀಕರಣ ಗಳಿಸಬೇಕು.
ಮೈದಾನದ ತುಂಬೆಲ್ಲ ಅಲ್ಲಲ್ಲಿ ಮಣ್ಣು ತುಂಬಿಕೊಂಡಿರುವ ಕಾರಣ ಈ ಬಾರಿ ಆಟೋಟ ಸ್ಪರ್ಧೆಗಳನ್ನು ನಡೆಸಲಾಗಿಲ್ಲ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ ಶೆಟ್ಟಿ ತಿಳಿಸಿದಾಗ ಜಿಲ್ಲಾಧಿಕಾರಿ ಕಾಲೇಜಿನ ಆಟದ ಮೈದಾನವನ್ನು ಬೇಗ ಸಮತಟ್ಟು ಗೊಳಿಸಲು ತಿಳಿಸಿದರು.
ತೀರಾ ಕೆಳಮಟ್ಟದಲ್ಲಿ ಹಾದು ಅಪಾಯವೊಡ್ಡುತ್ತಿರುವ ವಿದ್ಯುತ್ ತಂತಿಗಳನ್ನು ಹಾಗೂ ಮಣ್ಣು ಸಡಿಲ ಗೊಂಡು ವಾಲಿರುವ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಗಳನ್ನು ಸರಿಪಡಿಸಲು ತಿಳಿಸಲಾಯಿತು.

ಹೆದ್ದಾರಿ ಕಾಮಗಾರಿಯ ವೇಳೆ ತೆರವುಗೊಳಿಸಲಾದ 4 ಬಸ್ ನಿಲ್ದಾಣ ಗಳನ್ನು ಸ್ಥಳೀಯ ನಿವಾಸಿಗಳಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸ್ಥಳ ನಿಗದಿ ಮಾಡಿ ನಿರ್ಮಿಸುವಂತೆ ತಿಳಿಸಿದರು.
ಸಾಣೂರು ಪದವಿಪೂರ್ವ ಕಾಲೇಜಿನ ರಸ್ತೆಯ ಪಕ್ಕದಲ್ಲಿ ರಕ್ಷಣಾ ತಡೆಗೋಡೆ ರಾಷ್ಟ್ರೀಯ ಹೆದ್ದಾರಿಯಿಂದ ಅತಿ ಎತ್ತರದಲ್ಲಿದ್ದು ವಿದ್ಯಾರ್ಥಿಗಳು ಓಡಾಡುವಾಗ ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡ ಬಗ್ಗೆ ಸಾಣೂರು ನರಸಿಂಹ ಕಾಮತ್ ರವರು ಶಾಸಕರ ಗಮನ ಸೆಳೆದಾಗ, ಡಿ ಬಿ ಎಲ್ ಜನರಲ್ ಮ್ಯಾನೇಜರ್ ರಾಘವ ರಾವ್ ರವರು ರಕ್ಷಣಾ ತಡೆಗೋಡೆಯ ಮೇಲ್ಭಾಗಕ್ಕೆ ಉದ್ದಕ್ಕೂ ಕನಿಷ್ಠ 5 ಅಡಿ ಎತ್ತರದ ಕಬ್ಬಿಣದ ಗ್ರಿಲ್ ಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದರು.
ಇರ್ವತ್ತೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನು ಸಂಧಿಸುವ ಭಾಗವು ಪ್ರಯಾಣಿಕರು ಹಾಗೂ ವಾಹನ ದಟ್ಟಣೆಯಿಂದ ಆಗಾಗ ಸಣ್ಣಪುಟ್ಟ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು ಕೂಡಲೇ ಸರ್ವಿಸ್ ರಸ್ತೆ ನಿರ್ಮಿಸಿ ರಸ್ತೆ ಅಗಲೀಕರಣ ಗೊಳಿಸುವಂತೆ ಶಾಸಕ ವಿ. ಸುನಿಲ್ ಕುಮಾರ್ ರವರು ಗುತ್ತಿಗೆದಾರ ಕಂಪನಿಗೆ ನಿರ್ದೇಶನ ನೀಡಿದರು.
ಪುಲ್ಕೇರಿ ಬೈಪಾಸ್ ನಲ್ಲಿ ರಸ್ತೆಯ ಎರಡು ಬದಿ ವ್ಯವಸ್ಥಿತ ಚರಂಡಿ ವ್ಯವಸ್ಥೆ ಹಾಗೂ ಹೈಮಾಸ್ಟ್ ದೀಪವನ್ನು ಅಳವಡಿಸುವುದು, ಪುಲ್ಕೇರಿ ಬೈಪಾಸ್ ನಿಂದ ಸಾಣೂರು ಪೇಟೆಯನ್ನು ಹಾದು (2 ಕಿ.ಮೀ) ಸಾಣೂರು ಯುವಕ ಮಂಡಲದ ತನಕ ಸರ್ವಿಸ್ ರಸ್ತೆ ನಿರ್ಮಿಸಲು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಜಾವೇದ್ ಮೊಹಮ್ಮದ್ ಅಜ್ಮಿ ಯವರ ಅನುಪಸ್ಥಿತಿ ಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಲಾಯಿತು.
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಬದಿಯ ಚರಂಡಿ ,ರಸ್ತೆ ,ಬೀದಿ ದೀಪ, ಕುಡಿಯುವ ನೀರಿನ ಪೈಪ್ ಲೈನ್ ಮೊದಲಾದ ಅತಿ ಅಗತ್ಯದ ಕಾಮಗಾರಿಗಳನ್ನು ವಿಳಂಬಿಸದೇ ಕೂಡಲೇ ಕೈಗೆತ್ತಿಕೊಳ್ಳುವಂತೆ ದಿಲೀಪ್ ಬಿಲ್ಡ್ ಕಾನ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿ ಮುಂದಿನ ದಿನಗಳಲ್ಲಿ ಇಂತಹ ವಿಚಾರಗಳನ್ನು ತಹಶೀಲ್ದಾರ್ ಮತ್ತು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಪಂಚಾಯತ್ ಆಡಳಿತದ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ಬಗೆಹರಿಸುವಂತೆ ನಿರ್ದೇಶಿಸಿದರು.
ರಾ.ಹೆ . ಸಿಬ್ಬಂದಿಗಳಾದ ಸಂಜೀವ ಮತ್ತು ಗೋಪಾಲ ಸೇರಿಗಾರ್ ರಾ.ಹೆ ಎಂಜಿನಿಯರ್ ನಾಸೀರ್, ಪ್ರಸಾದ್, ಡಿ ಬಿ ಎಲ್ ಕಂಪನಿಯ ಜನರಲ್ ಮ್ಯಾನೇಜರ್ ರಾಘವ ರಾವ್ ,ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿ,ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ ಜೈನ್, ಉಪಾಧ್ಯಕ್ಷೆ ಯಶೋದಾ ಶೆಟ್ಟಿ ,ಪಂ. ಅಭಿವೃದ್ಧಿ ಅಧಿಕಾರಿ ಮಧು ಮತ್ತು ಪಂಚಾಯತ್ ಸದಸ್ಯರು, ಮಾಜಿ ಜಿ.ಪಂ ಮಾಜಿ ಸದಸ್ಯ ಉದಯ ಕೋಟ್ಯಾನ್,ತಾಪಂ ಮಾಜಿ ಸದಸ್ಯರಾದ ಪ್ರವೀಣ್ ಕೋಟ್ಯಾನ್ , ಸಾಣೂರು ಗ್ರಾಮ ಪಂಚಾಯತ್ ಸಾಣೂರು ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಸಾಣೂರು ಹೆದ್ದಾರಿ ಭೂಮಾಲಕರ ಹೋರಾಟ ಸಮಿತಿ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಸಾ
.






































