ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಅಹಾಕಾರ ಎದುರಾಗಿದ್ದರೂ ಅಕ್ರಮ ಕಾಮಗಾರಿಗೆ ಯಥೇಚ್ಛ ಕುಡಿಯುವ ನೀರು ದುರ್ಬಳಕೆ ಮಾಡುತ್ತಿದ್ದರೂ ಕಾರ್ಕಳ ಪುರಸಭಾ ಆಡಳಿತ ಹಾಗೂ ಜಿಲ್ಲಾಡಳಿವು ಮೌನಕ್ಕೆ ಶರಣಾಗಿರುವ ಕುರಿತು ಕಾರ್ಕಳ ಪುರಸಭಾ ಸದಸ್ಯ ಖೇದ ವ್ಯಕ್ತಪಡಿಸಿದ್ದಾರೆ. ತಕ್ಷಣದಿಂದ ಕಾಮಗಾರಿ ನಿಲ್ಲಿಸುವಂತೆ ಅವರು ಆಗ್ರಹಿಸಿದ್ದಾರೆ.


ಉಡುಪಿ ಜಿಲ್ಲೆಗೆ ಸಂಬಂಧಿಸದ ಕಾಮಗಾರಿ ವಹಿಸಿಕೊಂಡ ಕಂಟ್ರಾಕ್ಟರ್ ದಾರರೊಬ್ಬರು ಕಬ್ಬಿಣದ ಪೈಪ್ ಗೆ ಹೊರಭಾಗದಲ್ಲಿ ಸಿಮೆಂಟ್ ಹೊದಿಕೆ ಸಿದ್ಧ ಪಡಿಸಲು ಐತಿಹಾಸಿಕ ರಾಮಸಮುದ್ರ ಪರಿಸರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಕಾಮಗಾರಿಗಾಗಿ ರಾಮಸಮುದ್ರದ ಕುಡಿಯುವ ನೀರನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ. ಪ್ರಸ್ತುತ ನಡೆಸುವ ಕಾಮಗಾರಿಯ ತ್ಯಾಜ್ಯ ಮಳೆಗಾಲದಲ್ಲಿ ರಾಮಸಮುದ್ರ ಸೇರುವ ಸಾಧ್ಯತೆಗಳು ಬಹುತೇಕ ನಿಚ್ಚಳವಾಗಿದೆ. ಇದರಿಂದ ರಾಮಸಮುದ್ರದ ನೀರು ಕಲಷಿತಗೊಳ್ಳಲಿದೆ. ರಾಮಸಮುದ್ರದ ನೀರನ್ನು ಪುರಸಭಾ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರನ್ನಾಗಿ ಬಳಸುತ್ತಾ ಬಂದಿದ್ದರೂ ಅಕ್ರಮ ಕಾಮಗಾರಿಗೆ ಇದೇ ಪ್ರದೇಶದಲ್ಲಿ ಎಡೆಬಿಡದೇ ನಡೆಯುತ್ತಿರುವುದಕ್ಕೆ ಘನ ವ್ಯಕ್ತಿಗಳ ಅಭಯಹಸ್ತ ಇರುವುದು ಎದ್ದು ತೋರುತ್ತಿದೆ.
ಕಾರ್ಕಳ ಪುರಸಭೆಯ ಎಲ್ಲಾ ವಾರ್ಡಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಇದರಿಂದಾಗಿ ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕೆಲವು ವಾರ್ಡಗಳಲ್ಲಿ ದಿನ ಬಳಕೆ ಹಾಗೂ ಕುಡಿಯುವ ನೀರಿಗೂ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಬೇರೆ ಯಾವುದೋ ಜಿಲ್ಲೆಯ ಕಾಮಗಾರಿಯನ್ನು ವಹಿಸಿಕೊಂಡ ಗುತ್ತಿಗೆದಾರ ರಾಮಸಮುದ್ರಕ್ಕೆ ಅಕ್ರಮವಾಗಿ ಪಂಪ್ ಅಳವಡಿಸಿ ತನ್ನ ಕಾಮಗಾರಿಗಳಿಗೆ ಯಥೇಚ್ಛವಾಗಿ ನೀರು ಬಳಸುತ್ತಿದ್ದು ಅದನ್ನು ತಕ್ಷಣ ನಿಲ್ಲಿಸುವಂತೆ ಮತ್ತು ಈ ಬಗ್ಗೆ ಕ್ರಮ ಜರುಗಿಸುವಂತೆ ಜಿಲ್ಲಾದಿಕಾರಿಯವರನ್ನು ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.
ಈ ಅಕ್ರಮ ಕಾಮಗಾರಿಯ ಬಗ್ಗೆ ಜಲಮಂಡಲಿಯ ಅಧಿಕಾರಿಗಳು, ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಲ್ಲಿ ಸಾರ್ವಜನಿಕರು ಎಷ್ಟೇ ದೂರು ಸಲ್ಲಿಸಿದರೂ ಅವರ ನಿರ್ಲಕ್ಷ್ಯ ಮತ್ತು ಮೌನ ಅನೇಕ ಸಂಶಯಗಳಿಗೆ ಅವಕಾಶ ಮಾಡಿಕೊಟ್ಟಿದೆ. ಪುರಸಭಾ ವ್ಯಾಪ್ತಿಯ ನೀರಿನ ಸಮಸ್ಯೆಯ ಗಂಬೀರತೆಯ ಬಗ್ಗೆ ಸಂಪುರ್ಣ ಮಾಹಿತಿ ಇದ್ದರೂ ಅಕ್ರಮ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕಾಗಿ ಮನವಿಯಲ್ಲಿ ಆಗ್ರಹಿಸಿದ್ದಾರೆ.






































