ಬೆಂಗಳೂರು : ರಾಜಕೀಯ ನಿವೃತ್ತಿ ಘೋಷಣೆ ಹಿಂಪಡೆಯುತ್ತೇನೆ ಎಂದಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ತಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್ನುವ ಮೂಲಕ ಅಚ್ಚರಿ ರಾಜಕೀಯ ನಡೆ ಪ್ರದರ್ಶಿಸಿದ್ದಾರೆ.
ಕೆಲವು ದಿನಗಳ ಹಿಂದೆ ಚುನಾವಣಾ ರಾಜಕೀಯದಿಂದ ಬಿಜೆಪಿ ಹಾಲಿ ಸಂಸದ ಡಿ.ವಿ ಸದಾನಂದಗೌಡ ಅವರು ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು.
ಈ ಬೆಳವಣಿಗೆಯ ಬಳಿಕ ಪಕ್ಷದ ಬೆಳವಣಿಗೆಯ ರಾಜಕೀಯ ದೃಷ್ಟಿ ಕೋನ ಮುಂದಿಟ್ಟು ಬಿಜೆಪಿ ಕೆಲ ನಾಯಕರು ಅವರ ಮನವೊಲಿಸುವಲ್ಲಿ ಸಫಲರಾಗಿದ್ದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದೆ. ಕ್ಷೇತ್ರದ ಎಲ್ಲ ಶಾಸಕರು, ಮುಖಂಡರು ನೀವೇ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಇನ್ನೂ ನಾನು ಹತ್ತು ವರ್ಷ ರಾಜಕೀಯದಲ್ಲಿರಬಹುದು. ಒಂದು ವೇಳೆ ನನಗೆ ಟಿಕೆಟ್ ಕೊಡದಿದ್ರೆ, ಸ್ವಲ್ಪ ನೋವಾಗುತ್ತದೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ, ಬಿಜೆಪಿ ನನಗೆ ಎಲ್ಲವೂ ಕೊಟ್ಟಿದೆ ಎಂದು ಹೇಳಿದ್ದಾರೆ.






































