ಮನೆಗೆ ಬಂದ ಯಾವುದೇ ಅತಿಥಿಗಳಿಗೆ ಅಗೌರವ ತೋರಿಲ್ಲ : ಮಾಜಿಶಾಸಕ ರಘಪತಿ ಭಟ್
ಉಡುಪಿ : ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾll ಧನಂಜಯ ಸರ್ಜಿ ಅವರು “ಮನೆಯ ಗೇಟಿನಲ್ಲಿ ನಿಲ್ಲಿಸಿ ರಘುಪತಿ ಭಟ್ ವಾಪಾಸು ಕಳಿಸಿದ್ದಾರೆ” ಎಂದು ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಡಾll ಧನಂಜಯ ಸರ್ಜಿ ನನ್ನ ಮನೆಗೆ ಬಂದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಅವರ ಈ ರೀತಿಯ ಸುಳ್ಳು ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿಯ ಮಾಜಿಶಾಸಕ ಹಾಗೂ ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ರಘಪತಿ ಭಟ್ ಸಾಮಾಜಿಕ ಜಾಲತಾಣದಲ್ಲಿ ನೈಜ ವಿಚಾರವನ್ನು ಹಂಚಿಕೊಂಡಿದ್ದಾರೆ.

ಯಾರೇ ಮನೆಗೆ ಬಂದವರು ಅವರನ್ನು ಉಪಚರಿಸಿ ಕಳುಹಿಸುವ ಸಂಸ್ಕೃತಿ ನಮ್ಮದು. ನನ್ನ ಮನೆಯ ಬಗ್ಗೆ ದಶಕಗಳಿಂದ ಉಡುಪಿಯ ಜನತೆಗೆ ಗೊತ್ತಿದೆ. ಅವರ ಈ ರೀತಿಯ ಸುಳ್ಳು ಹೇಳಿಕೆ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ.
ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವ ನಿರ್ಧಾರ ಕೈಗೊಂಡಾಗ ಜಿಲ್ಲೆಯ ಶಾಸಕರು, ಬಿಜೆಪಿ ನಾಯಕರು ನನ್ನ ಮನೆಗೆ ಬಂದಿದ್ದಾರೆ. ಎಲ್ಲರಲ್ಲೂ ಗೌರವದಿಂದ ಮಾತನಾಡಿ ನನ್ನ ನಿರ್ಧಾರ ತಿಳಿಸಿದ್ದೆ. ಯಾರಿಗೂ ಅಗೌರವ ತೋರಿಸಿಲ್ಲ. ಇದು ಎಲ್ಲರಿಗೂ ತಿಳಿದ ವಿಚಾರವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಭಾರಿಯಾಗಿದ್ದಾಗ ಡಾll ಧನಂಜಯ ಸರ್ಜಿ ಅವರು ಶಿವಮೊಗ್ಗ ಗ್ರಾಮಾಂತರ ಪ್ರಭಾರಿಯಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಮೇಲೆ ನನಗೆ ಗೌರವ ಇದೆ. ಈ ರೀತಿ ಜನರ ದಿಕ್ಕು ತಪ್ಪಿಸುವ ಹೇಳಿಕೆ ಸರಿಯಲ್ಲ ಎಂದು ರಘಪತಿ ಭಟ್ ತಿಳಿಸಿದ್ದಾರೆ.


























