ಕಾರ್ಕಳ : ಭಾರತೀಯ ಜೈನ್ ಮಿಲನ್ ಕಾರ್ಕಳ ಹಾಗೂ ಯುವ ಜೈನ್ ಮಿಲನ್ ಕಾರ್ಕಳ –ಇದರ ಮಾರ್ಚ್ ತಿಂಗಳ ಮಾಸಿಕ ಸಭೆಯು ಭ.೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿ ವಾಲ್ಪಾಡಿಯಲ್ಲಿ ಕಾರ್ಕಳ ದಾನಸಾಲೆಯ ಜೈನ ಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕರ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಪಾವನ ಸಾನಿಧ್ಯದಲ್ಲಿ ನಡೆಯಿತು.
ಪಂಚ ಣಮೋಕಾರ ಮಂತ್ರದೊಂದಿಗೆ ಸಭೆಯು ಪ್ರಾರಂಭವಾಯಿತು.ಮಿಲನಿನ ಅಧ್ಯಕ್ಷರಾದ ಮಾಲತಿ ವಸಂತರಾಜ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಅತಿಥೇಯರಾದ ವೀರ್ ಅಭಯ ಕುಮಾರ್ ರವರು ಎಲ್ಲರನ್ನೂ ಸ್ವಾಗತಿಸಿದರು.
ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರಾದ ಪ್ರೋ.ಕೆ.ಗುಣಪಾಲ್ ಕಡಂಬರವರನ್ನುಗಣ್ಯರೆಲ್ಲರ ಸಮ್ಮುಖದಲ್ಲಿ ಸ್ವಾಮೀಜಿಯವರು ಜೈನ್ ಮಿಲನ್ ಕಾರ್ಕಳದ ಪರವಾಗಿ ಸನ್ಮಾನಿಸಿ,ಆಶೀರ್ವದಿಸಿದರು.
ಸನ್ಮಾನಿತರು ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿ ದೈವ ಭಕ್ತಿ ಮತ್ತು ಇಚ್ಛಾಶಕ್ತಿ ಗಳೆರಡು ಇದ್ದರೆ ಏನನ್ನೂ ಸಾಧಿಸಬಹುದು ಎಂದು ಹೇಳಿದರು.
ಅನಿಲ್ ಜೈನ್ ಪೆರಿಬೆಟ್ಟು, ವಾಲ್ಪಾಡಿ,ಇವರನ್ನೂ ಕೂಡಾ ಇವರ ನಿಸ್ವಾರ್ಥ ಸೇವೆಗಾಗಿ ಸನ್ಮಾನಿಸಲಾಯಿತು.
ಇನ್ನೋರ್ವ ಮುಖ್ಯ ಅತಿಥಿ ಸಂಪತ್ ಸಾಮ್ರಾಜ್ಯ ರವರು ಮಾತನಾಡಿ ಜೈನ ಧರ್ಮದ ಅಹಿಂಸಾ ತತ್ವ ಮತ್ತು ಸಸ್ಯಾಹಾರದ ಮಹತ್ವವನ್ನು ತಿಳಿಸಿದರು.
ನಿರ್ದೇಶಕ ಯುವರಾಜ್ ಬಲಿಪರು ಸಹಕರಿಸಿದ ಸರ್ವರಿಗೂ ಅಭಿನಂದನೆಗಳನ್ನು ತಿಳಿಸಿದರು.
ಅನುವಂಶೀಯ ಆಡಳಿತ ಮೊಕ್ತೇಸರರೂ ಉಪಸ್ಥಿತರಿದ್ದರು. ಅಧ್ಯಕ್ಷರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ “ಧರ್ಮದ ಪ್ರಕಾರ ಸತ್ಯವಾದ ಮಾತು ಸ್ವಚ್ಛವಾದ ಹೃದಯ ಇದ್ದರೆ ಪ್ರತೀ ಕ್ಷಣವೂ ಸುಖವಿದೆ” ಎಂದು ಹೇಳಿದರು.ಸುಮಾರು ನೂರು ಮಂದಿ ಸದಸ್ಯರು ಭಾಗವಹಿಸಿದ್ದರು.
ಶ್ರುತ ಜೈನ್ ಪ್ರಾರ್ಥನೆ ಹಾಡಿದರು. ಪ್ರಾಂಜಲಿ ಜೈನ್ ಶಾಂತಿ ಮಂತ್ರ ಹೇಳಿದರು.ರಾಜೇಂದ್ರ ಧನ್ಯವಾದ ಸಮರ್ಪಿಸಿದರು.
ಶ್ರೀ ಯೋಗರಾಜ ಶಾಸ್ತ್ರಿ ನಿರೂಪಿಸಿದರು.






































