ಪೊಲೀಸರೇಕೆ ಎಡವಿದ್ದಾರೆ?
ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸುವ ಸಲುವಾಗಿ ಬೆಳ್ತಂಗಡಿಯಾದ್ಯಂತ ರಾಡಿಯೆಬ್ಬಿಸಿದ್ದ ಪೊಲೀಸರಿಗೆ ಅದೊಂದು ರೀತಿಯಲ್ಲಿ ತಮಗೇ ಅವಮಾನ ಎಂದನಿಸುತ್ತಿಲ್ಲವೇ ?

ಬಂಧಿತ ವ್ಯಕ್ತಿಯನ್ನು ಬಿಜುಗಡೆ ಮಾಡುವಂತೆ ಒತ್ತಾಯಿಸಲು ತನ್ನ ಬೆಂಬಲಿಗರೊಡನೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದಿದ್ದ ಶಾಸಕ ಹರೀಶ್ ಪೂಂಜಾ ಗದರಿಸಿ,ಬೆದರಿಸಿ ಮಾತಾಡಿದ್ದಾಗಲಿ,ಕರ್ತವ್ಯಕ್ಕೆ ಅಡ್ಜಿ ಪಡಿಸಿದ್ದಾರೆ ಎನ್ನುವ ಆರೋಪವಾಗಲಿ ಏನೇ ಇದ್ದರೂ ಶಾಸಕನನ್ನು ಬಂಧಿಸುವಂತಹ ಪ್ರಕರಣವೇನಾಗಿದೆ?
ಅಪ್ಪನ ಠಾಣೆಯಲ್ಲ, ಅದಲ್ಲ ಇದಲ್ಲ,ಹಾಗೆ ಮಾಡುತ್ತೇನೆ ,ಕೆ ಜಿ ಹಳ್ಳಿಯ ಘಟನೆ ಮರುಕಳಿಸೀತು ಎಂದಿತ್ಯಾದಿಯಾಗಿ ಕೂಗಿರುವ ಶಾಸಕನು ಅಲ್ಲಿ ಬೇರೇನು ಮಾಡಿದ್ದಾರೆ? ಪೊಲೀಸ್ ಪೇದೆಗೆ,ಪಿ ಎಸ್ ಐ ಗೆ ಕಪಾಳಕ್ಕೆ ಬಾರಿಸಿದ್ದಾರೆಯೆ? ಅಲ್ಲಿದ್ದ ಕುರ್ಚಿ ಸಲಕರಣೆಯನ್ನು ಎತ್ತಿ ಬಿಸಾಡಿದ್ದಾರೆಯೇ?ದೀಪ ಆರಿಸಿ ಮೈಮೇಲೆ ಹಲ್ಲೆ ಮಾಡಿದ್ದಾರೆಯೆ? ಕೇವಲ ಬಯಾಲ್ಲಿ ಗದರಿಸಿದ್ದಕ್ಕೆ ಜೈಲಿಗಟ್ಟುವಂಥದ್ದೇನಿದೆ?
ಅಂಥ ದೊಡ್ಡ ಅಪರಾಧವನ್ನಾಗಲಿ,ಬಂಧಿಸಬಹುದಾದಂತಹ ನಡವಳಿಕೆಯಾಗಲಿ ನಡೆದಿಲ್ಲ ಎಂದು ಗೊತ್ತಿದ್ದೇ ತಾನೆ ಆ ಸೆಕ್ಷನ್ ಅಡಿಯಲ್ಲಿ ದೂರು ಬರೆದುಕೊಂಡಿರುವುದು?
ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರೆ ಅದಕ್ಕೆ ಮುನ್ನೂರು ರೂಪಾಯಿ ದಂಡ ಕಟ್ಚಬೇಕೇ ಹೊರತು ಶಾಸಕನು ಅಷ್ಟೇ ಅಲ್ಲ ಬೇರೆ ಯಾರನ್ನೂ ಕೂಡಾ ಬಂಧಿಸುವಂತಿಲ್ಲ.
ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿ ಜಾಮೀನಿನಲ್ಲಿ ಬಿಡಬಹುದಾದ ಕೇಸ್ ಅದು.ಅದಕ್ಕೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರೂ ತಕ್ಷಣವೇ ಜಾಮೀನು ಕೊಡಲೇಬೇಕು.ಕೊಡದಿದ್ದರೆ ನ್ಯಾಯಾಯಾಧೀಶರು ಕೂಡಾ ಇಲಾಖಾ ತನಿಖೆಗೆ ಒಳಗಾಗಬೇಕಾಗುತ್ತದೆ.
ಕಲಂ143,147,341,504,506,149 ಐಪಿಸಿ ಯಲ್ಲಿ ಶಾಸಕನಷ್ಚೇ ಅಲ್ಲ ಬೇರೆ ಯಾರನ್ನಾದರೂ ಬಂಧಿಸಿ ಹಣ್ಣುಗಾಯಿ ನೀರುಗಾಯಿ ಮಾಡುವುದಕ್ಕೆೆಲ್ಲಿದೆ ಅವಕಾಶ? ಅರ್ನೇಶ್ v/s ಬಿಹಾರ ಸರಕಾರ ಪ್ರತರಣದಕ್ಕೆ ನ್ಯಾಯಾಲಯ ಕೊಟ್ಟ ತೀರ್ಪು ಏನು ಹೇಳಿದೆ ಎನ್ನುವುದನ್ನು ಪೊಲೀಸ್ ಇಲಾಖೆ ಇನ್ನೂ ಕೂಡ ಪೂರ್ತಿ ತಿಳಿದುಕೊಂಡಂತಿಲ್ಲವೆನಿಸುತ್ತದೆ. ಯಾರನ್ನೇ ಕೂಡಾ ತಮ್ಮ ಇಚ್ಚಾನುಸಾರ ಬಂಧಿಸುವಂತಿಲ್ಲ,ಬಂಧಿಸುವಾಗಲೂ ತಿಳುವಳಿಕೆ ಪತ್ರ ಕೊಡುವುದು ಅಗತ್ಯ ಮತ್ತು ಅದನ್ನು ಪುಷ್ಠೀಕರಿಸುವಂತಹ ಪ್ರಕರಣ ದಾಖಲಾಗಿರಬೇಕಾಗುತ್ತದೆ.

ಹಾಗಾಗರೆ ಶಾಸಕನ ಮನೆಯ ದಾರಿಯುದ್ಧಕ್ಕೆ,ಮನೆಯ ಸುತ್ತ ಮುತ್ತ ಪೊಲೀಸ್ ಬಂದೋಬಸ್ತು,ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಇನ್ನಿತ್ಯಾದಿಯನ್ನು ಜಿಲ್ಲಾ ಪೊಲೀಸ್ ಆಡಳಿತ ನಿಯೋಜಿಸಿದ್ದಾರೂ ಯಾಕಾಗಿ? ಅಷ್ಟೆಲ್ಲ ಖರ್ಚು ಮಾಡಿದ್ದು ನಾಗರಿಕರ ತೆರಿಗೆ ಹಣವನ್ನಲ್ಲವೇ? ಲಕ್ಷಾಂತರ ರೂಪಾಯಿಗಳಷ್ಟು ಸರಕಾರದ ಪೊಲೀಸ್ ಇಲಾಖೆ ಖರ್ಚು ವೆಚ್ಚ ಮಾಡಿದ್ದಾದರೂ ಯಾವ ಪುರುಷಾರ್ಥಕ್ಕೆ? ಕೈಯಲ್ಲಿ ಯಾವುದಾದರೂ ನೋಟೀಸು ಕೂಡಾ ಇಲ್ಲದೆ ಮನೆಗೆ ಅಥವಾ ಕಚೇರಿಗೆ ಬಂದು ಒಬ್ಬ ಶಾಸಕನನ್ನು ಠಾಣೆಗೆ ಕರೆದರೆ ಆತ ಯಾಕೆ ಬರಬೇಕು? ಮುಂದೆ ದಿನಕ್ಕೊಬ್ಬ ಪೊಲೀಸ್ ಬಂದು ಹೇಳಿದರೂ ಹೋಗಬೇಕೆ? ಪೊಲೀಸರನ್ನು ಬರಿಗೈಯಲ್ಲಿ ಶಾಸಕರ ಮನೆಗೆ ಕಳುಹಿಸಿದ್ದೇ ದೊಡ್ಡ ಅಪರಾಧವಲ್ಲವೇ? ಪೊಲೀಸ್ ನಡವಳಿಕೆಗೇ ಅಪಚಾರವಲ್ಲವೇ? ಶಾಸಕನು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಅಥವಾ ಅದಕ್ಕೆ ಮುಂದಾದರೆ ಯಾರು ಯಾರ ಕಾಲಿಗೆ ಬೀಳಬೇಕಾದ ಸಂಧಿಗ್ಧ ಪರಿಸ್ಥಿತಿ??
ಪೊಲೀಸ್ ನಿರೀಕ್ಷಕರು ತನ್ನ ಕೊರಳಿಗೆ ತಾನೇ ಉರುಳು ತೋಡಿಸಿಕೊಳ್ಳುವ ಕೆಲಸ ಮಾಡಿಕೊಂಡಂತಾಗಿದೆ.ರಾಜಕೀಯ ಕುಮ್ಮಕ್ಕುಗಳು ಏನೇ ಇದ್ದರೂ ಕೂಡ ಪೊಲೀಸ್ ಅಧಿಕಾರಿಗಳ ಮೇಲೆ ನ್ಯಾಯಾಲಯ ಕಣ್ಣಿಟ್ಟುಕೊಂಡೇ ಇರುತ್ತದೆ. ಈಗೀಗ ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಪೊಲೀಸರೇ ಆರೋಪಿಗಳಾಗುತ್ತಿರುವುದನ್ನು ಮಾಧ್ಯಮಗಳು ಪ್ರಕಟಿಸುತ್ತಿವೆ
ರಸ್ತೆಯಲ್ಲಿ ನಿಂತು ಕೇಸು ಬರೆಯುವ ಟ್ರಾಫಿಕ್ ಪೊಲೀಸರು ಕೂಡಾ ನಿರಪರಾಧಿ ಚಾಲಕ ಏನಾದರೂ ಮಾತಾಡಿದನೆಂದರೆ ಕರ್ತವ್ಯಕ್ಕೆ ಅಡ್ಡಿಮಾಡಿದ ಎಂದು ಠಾಣೆಗೊಯ್ದು ಒದೆಯುತ್ತಾರೆ,ಬಡಿಯುತ್ತಾರೆ. ಹಾಗೆ ಪೆಟ್ಚು ತಿಂದವನು ನೇರವಾಗಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದರೆ ಕರ್ತವ್ಯಕ್ಕೆ ಅಡ್ಡಿ ಕೇಸಿಗೆ ನಿಜವಾಗಿಯಾದರೂ ಏನು ಮಾಡಬೇಕಾಗಿತ್ತು ಎನ್ನುವುದನ್ನು ನ್ಯಾಯಾಧೀಶರೇ ಪೊಲೀಸರ ಮೇಲೆ ಕಠಿಣ ಕ್ರಮಕ್ಕೆ ಬರೆಯುತ್ತಾರೆ. ಪೆಟ್ಟು ತಿಂದವರು ಆ ರೀತಿ ಮಾಡದ್ದರಿಂದ ಈ ಎಲ್ಲ ಪೊಲೀಸ್ ಬೆದರಿಕೆಗಳು ಜಾಸ್ತಿಯಾಗಲು ಕಾರಣವಾಗಿದೆ.
ಮುನ್ನೂರು ರೂಪಾಯಿ ದಂಡ ಕಟ್ಟುವ ಸೆಕ್ಷನ್ ಬರೆದು ದೂರು ದಾಖಲಿಸಿಕೊಂಡ ಪೊಲೀಸರು ಶಾಸಕನ ಮನೆಯ ಸುತ್ತ ಬಂಧನ ಬಲೆ ಬೀಸಿದ್ದಾರೆ ಎಂದರೆ ಯಾವ ಸರಕಾರವೂ ಸಹಿಸಲಿಕ್ಕಿಲ್ಲ. ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಪೊಲೀಸರು ತಮ್ಮ ಯೂನಿಫಾರ್ಮನ್ನು ಕಳಚಿ ಮನೆಯಲ್ಲಿ ಕೂರುವ ಸ್ಥಿತಿ.
ಶಾಸಕ ಹರೀಶ್ ಪೂಂಜಾಗೆ ಪೊಲೀಸರು ನೋಟೀಸು ಜ್ಯಾರಿ ಮಾಡಬೇಕಾಗಿತ್ತು.ಅದಕ್ಕೂ ಸ್ಪಂದಿಸದಿದ್ದರೆ ಕೋರ್ಟ್ ಆದೇಶ ಪಡೆದು ಠಾಣೆಗೆ ಕರೆತಂದು ವಿಚಾರಿಸಿ ಬಿಡಬಹುದಾಗಿತ್ತು ಅಥವಾ ನ್ಯಾಯಾಲಯದಲ್ಲಿ ಹಾಜರುಪಡಿಸಬಹುದಿತ್ತು.
ಈ ಎಲ್ಲ ನಡವಳಿಕೆಗಳು ಸರಕಾರದ ಮೇಲೆ ತಪ್ಪು ಅಭಿಪ್ರಾಯ ಹುಟ್ಟು ಹಾಕುತ್ತದೆ. ನಾಗರಿಕ ಸಮಾಜದಲ್ಲಿ ಕೆಟ್ಟ ಸಂದೇಶಗಳು ಹರಿದಾಡುತ್ತದೆ. ಒಂದು ಇಲಾಖೆಯೆ ಸ್ವ ಇಚ್ಚೆಯಿಂದ ಜನಪ್ರತಿನಿಧಿಯ ಮೇಲೆ ಅದೇನೊ ಸೇಡು ತೀರಿಸಿಕೊಳ್ಳುವ ಕೆಲಸ ಮಾಡಲು ಮುಂದಾಗುತ್ತಿದೆ ಎಂದೆಲ್ಲ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಸರಕಾರವಾಗಲಿ,ಜಿಲ್ಲಾ ಪೊಲೀಸ್ ಆಡಳಿತವು ಕಾನೂನಿನ ತಿಳುವಳಿಕೆಯನ್ನು ಮರೆಯಲ್ಲಿಟ್ಟಂತೆ ವರ್ತಿಸಿರುವುದು ಖಂಡನೀಯ ವಿಚಾರ. ನಾಗರಿಕರು ಹೆಚ್ಚು ತಿಳಿದುಕೊಂಡಿದ್ದಾರೆ ಎನ್ನುವ ಪರಿಜ್ಞಾನ ಪೊಲೀಸರಿಗೆ ಇರಬೇಕಾಗಿದೆ.ಬಂಧನದ ಗುಲ್ಲೆಬ್ಬಿಸಿದ ಪೊಲೀಸರಿಗೆ ಶಾಸಕನನ್ನು ಬಂಧಿಸುವುದಕ್ಕಾಗಲಿಲ್ಲ ಯಾಕೆ? ಅಲ್ಲೊಂದು ಲಾಠೀ ಚಾರ್ಜು ಮಾಡಿಸಿ ಕ್ಷೇತ್ರವನ್ನು ಪ್ರಕ್ಷುಬ್ಧಗೊಳಿಸುವುದಾಗಿತ್ತೇ? ಏನು?
ಪ್ರತಿಯೊಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಅದರ ಪಕ್ಷದ ಮತ್ತು ಕಾರ್ಯಕರ್ತರ ಹಿತವನ್ನೆ ಮೊದಲು ಬಯಸುವುದು ಸರ್ವೇ ಸಾಮಾನ್ಯವಾಗಿದೆ.ಹಾಗಿರುವಾಗ,ಶಾಸಕ ಹರೀಶ್ ಪೂಂಜಾ ಮಾತಾಡಿದ್ದರಲ್ಲಿ ತಪ್ಪೇನಿಲ್ಲ. ಯಾವ ಪಕ್ಷದ ಶಾಸಕ,ಸಂಸದ ತನ್ನ ಕಾರ್ಯಕರ್ತನ ಪರವಾಗಿ ಹಾಗೆಲ್ಲ ಮಾತಾಡಿಲ್ಲ,ಮಾತಾಡುತ್ತಿಲ್ಲ ?ಹೇಳಿ.
ಸಮಾಜದಲ್ಲಿ ಯಾವನೇ ನಾಗರಿಕನಿಗೆ ಕಾನೂನಿನ ರಕ್ಷಣೆಯಲ್ಲಿ ಓಡಾಡುವುದಕ್ಕೆ ಅವಕಾಶ ಕೊಡಬೇಕಾದ ಪೊಲೀಸರು ಇಂಥದ್ದೆಲ್ಲ ಚಿಲ್ಲರೆ ಕೆಲಸಗಳಿಗೆ ಮುಂದಾಗುವುದರಿಂದ ಅಲ್ಲಿ ರಾಜಕೀಯ ಪಕ್ಷ ವಿಚಾರ ಹೊರತಾಗಿ ಪೊಲೀಸು ಮತ್ತು ನಾಗರಿಕ ಸಂಬಂಧಗಳಲ್ಲಿನ ಭಿನ್ನಮತ,ದ್ವೇಷ ಹೆಚ್ಚಾಗುತ್ತದೆ.ಜಿಲ್ಲಾ ಎಸ್. ಪಿ. ಯವರಿಗೆ ಕೂಡಾ ಹರೀಶ್ ಪೂಂಜ ಕೆಟ್ಟದಾಗಿ ಮಾತಾಡಿದ್ದಾರೆಯಾದರೂ ಈ ರೀತಿಯ ಬಂಧನ ಕ್ರಿಯೇಷನ್ಸ್ ಸರಿಕಾಣಲಿಲ್ಲ ಎಂದಷ್ಟೆ ಈ ಬರೆಹದ ಉದ್ದೇಶ.
- ವಿ. ಕೆ. ವಾಲ್ಪಾಡಿ


























