ಉಡುಪಿ: ಉಡುಪಿಯ ರಾಷ್ಟ್ರೀಯ ಹೆದ್ದಾರಿ ಕುಂಜಿಬೆಟ್ಟು ಎಂಬಲ್ಲಿ ಮೇ 18ರಂದು ನಡೆದಿದ್ದ ಗ್ಯಾಂಗ್ವಾರ್ ಪ್ರಕರಣದಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಶರೀಫ್ಗೆ ಚಿಕಿತ್ಸೆ ನೀಡಿ ಕಾನೂನಾತ್ಮಕವಾಗಿ ಪೊಲೀಸರಿಗೆ ಮಾಹಿತಿ ನೀಡದೇ ಇದ್ದ ಆರೋಪದಡಿಯಲ್ಲಿ ವೈದ್ಯರೊಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 18ರಂದು ನಸುಕಿನ ವೇಳೆ ನಡೆದ ಗ್ಯಾಂಗ್ವಾರ್ನಲ್ಲಿ ಕಾರು ಢಿಕ್ಕಿ ಹೊಡೆದು ರಸ್ತೆಗೆ ಬಿದ್ದ ಶರೀಫ್ನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿದ್ದರು. ಇದರಿಂದ ಶರೀಫ್ನ ಎಡಕಾಲು, ಬಲ ಕಿವಿ ಹಿಂಬದಿ, ಬಲಕೈಗೆ ಗಾಯವಾಗಿತ್ತು.
ನಂತರ ಶರೀಫ್ನನ್ನು ಇತರೆ ಆರೋಪಿಗಳಾದ ಅಲ್ಪಾಝ್, ಮಜೀದ್ ಚಿಕಿತ್ಸೆಗಾಗಿ ಪಡುಬಿದ್ರಿಯಲ್ಲಿರುವ ಸಿದ್ದಿ ವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ಆಸ್ಪತ್ರೆಯ ವೈದ್ಯ ಡಾ. ಜಾರ್ಜ್ ಸಾಜಿ ಎಂಬವರು ಆರೋಪಿಯನ್ನು ದಾಖಲು ಮಾಡಿ ಕೊಂಡು ಚಿಕಿತ್ಸೆಯನ್ನು ನೀಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಪ್ರಕರಣವು ಕಾನೂನು ಕ್ರಮಕ್ಕೆ ಒಳಪಡುತ್ತದೆ ಎಂದು ತಿಳಿದಿದ್ದರೂ ಕೂಡ ಉದ್ದೇಶ ಪೂರ್ವಕವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಕರ್ತವ್ಯ ಲೋಪ ಎಸಗಿದ ಡಾ. ಜಾರ್ಜ್ ಸಾಜಿ ವಿರುದ್ಧ ನ್ಯಾಯಾಲಯದ ಅನುಮತಿಯನ್ನು ಪಡೆದು ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






































