ಕಾರ್ಕಳ: ಸರಕಾರಿ ಶಾಲೆಯಲ್ಲಿ, ಕನ್ನಡ ಮಾದ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ಕೀಳರಿಮೆ ಇರುತ್ತದೆ. ಸಾಧನೆ ಮಾಡುವ ಹಟ, ಛಲ ಇದ್ರೆ ಕಲಿಕೆಯ ಮಾಧ್ಯಮ ಯಾವುದೇ ಅಡ್ಡಿಯಾಗದು. ಕನ್ನಡ ಮಾಧ್ಯಮಲ್ಲಿ ಓದಿದ್ರೂ ಅದ್ಭುತ ಸಾಧನೆ ಮಾಡಬಹುದು. ನಾನು ಸರಕಾರಿ ಶಾಲೆಯಲ್ಲಿ, ಕನ್ನಡ ಮಾದ್ಯಮದಲ್ಲಿಯೇ ಓದಿರುವುದು. ಕರ್ನಾಟಕದಲ್ಲಿ ದೊಡ್ಡ ಸಾಧನೆ ಮಾಡಿದವರೆಲ್ಲಾ ಹೆಚ್ಚಿನವರು ಹಳ್ಳಿಯಿಂದ ಬಂದವರು. ಕನ್ನಡ ಮಾಧ್ಯಮಲ್ಲಿ ಕಲಿತವರು. ಬಾಲ್ಯ ಬಹಳ ಮುಖ್ಯ. ದೊಡ್ಡವರಾದ ಮೇಲೆ ನಾವು ಮಾಡುವ ಸಾಧನೆಗೆ ಬಾಲ್ಯದ ದಿನಗಳಲ್ಲಿ ತೆಗೆದುಕೊಂಡ ನಿರ್ಧಾರಗಳೇ ಪ್ರೇರಣೆ. ಸಣ್ಣದಾಗಿರುವಾಗ ನಾವು ಏನನ್ನು ಕಲಿಯುತ್ತೇವೆಯೋ ಅದು ದೊಡ್ಡವರಾದಾಗ ತುಂಬಾ ಸಹಾಯಕವಾಗುತ್ತದೆ ಎಂದು ಚಿತ್ರ ನಿರ್ದೇಶಕ ಕಿಶೋರ್ ಮೂಡುಬಿದಿರೆ ಹೇಳಿದರು.
ಕಾರ್ಕಳ ಸರಕಾರಿ ಹಿರಿಯ ಪ್ರಾಥಮಿಕ ಮೈನ್ ಶಾಲೆಯಲ್ಲಿ ಮಕ್ಕಳ ಪಠ್ಯೇತರ ಚಟುವಟಿಕೆಗೆ ಪೂರಕವಾದ ಬೇಸಿಗೆ ಶಿಬಿರ “ಕಲಾ ಸಿಂಚನ -2024” ರಲ್ಲಿ ದಿನದ ಅತಿಥಿಯಾಗಿ “ನನ್ನ ಬಾಲ್ಯ” ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಟೀವಿ, ಮೊಬೈಲ್ ಗಳಿಂದ ಸಾಧ್ಯವಾದಷ್ಟು ದೂರವಿರಿ. ಬಾಲ್ಯದ ಈ ವಯಸ್ಸಿನಲ್ಲಿ ಮೊಬೈಲ್ ಬೇಡ. ಪುಸ್ತಕಗಳನ್ನು ಓದಿ ಎಂದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಫಿಲ್ಮ್ ಇಂಡಸ್ಟ್ರಿಗೆ ತಾನು ಬಂದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಚಂದ್ರನಾಥ ಬಜಗೋಳಿ, ಶಿಕ್ಷಕಿಯರಾದ ಮಧುಶ್ರೀ ಅಶ್ವಿನಿ ಶ್ರೇಯಾ , ಪೂಜಾ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಸ್ವಾಗತಿಸಿದರು. ಪದವೀಧರ ಸಹ ಶಿಕ್ಷಕಿ ಪ್ರತಿಮಾ ದೇವದಾಸ್ ವಂದಿಸಿದರು. ಶಿಕ್ಷಕ ದೇವದಾಸ್ ಕೆರೆಮನೆ ನಿರೂಪಿಸಿದರು.
.
ಸರಕಾರಿ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರಗಳು ಅಪರೂಪ : ಶಿಕ್ಷಣಾಧಿಕಾರಿ ಬಿ ಎ ಲೋಕೇಶ್

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಕಾರ್ಕಳ ಇಲ್ಲಿ ಮಕ್ಕಳ ಪಠ್ಯೇತರ ಚಟುವಟಿಕೆಗೆ ಪೂರಕವಾದ ಬೇಸಿಗೆ ಶಿಬಿರ "ಕಲಾ ಸಿಂಚನ-2024" ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತ ಬೇಸಿಗೆ ಶಿಬಿರ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಮತ್ತು ಕ್ರಿಯಾಶೀಲರನ್ನಾಗಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಸರಕಾರಿ ಶಾಲೆಯ ಪೋಷಕರು ಸಹಕರಿಸಿದರೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯುತ್ತವೆ. ಈ ರೀತಿ ಸರಕಾರಿ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರಗಳು ಅಪರೂಪ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎ ಲೋಕೇಶ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ವಹಿಸಿದ್ದರು. ಬಿ ಆರ್ ಸಿ ಕೋ ಆರ್ಡಿನೇಟರ್ ಸಂತೋಷ ಕುಮಾರ್ ಶೆಟ್ಟಿ, ಶಿಬಿರದ ನಿರ್ದೇಶಕ ಚಂದ್ರನಾಥ ಬಜಗೋಳಿ, ಸಂಪನ್ಮೂಲ ವ್ಯಕ್ತಿಗಳಾದ ದೇವದಾಸ್ ಕೆರೆಮನೆ, ಕೆ. ಅಶೋಕ್ ಕುಮಾರ್, ಸುಜಿತ್ ಕಾರ್ಕಳ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಪರಸಪ್ಪ ಜೋಗಿನ, ಶಾಲಾ ಶಿಕ್ಷಕಿಯರಾದ ಮಧುಶ್ರೀ, ಅಶ್ವಿನಿ, ಶ್ರೇಯಾ ಹಾಗೂ ಶಾಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಬಿರದ ನಿರ್ದೇಶಕ ಚಂದ್ರನಾಥ ಬಜಗೋಳಿಯವರನ್ನು ಅಭಿನಂದಿಸಲಾಯಿತು.
ಶಿಬಿರಾರ್ಥಿಗಳು ತಯಾರಿಸಿದ ಕ್ರಾಫ್ಟ್, ಮುಖವಾಡ, ಚಿತ್ರ ಕಲೆ ಸೇರಿದಂತೆ ವಿವಿಧ ಕಲಾ ಹಾಗೂ ಹಾಡು , ನಾಟಕಾಭಿನಯ ಪ್ರದರ್ಶನ ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಸ್ವಾಗತಿಸಿದರು. ಪದವೀಧರ ಸಹ ಶಿಕ್ಷಕಿ ಪ್ರತಿಮಾ ದೇವದಾಸ್ ವಂದಿಸಿದರು. ಶಿಕ್ಷಕಿ ಪೂಜಾ ಕಾರ್ಯಕ್ರಮ ನಿರೂಪಿಸಿದರು.






































